ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಾಪುರ: ಸಪ್ತಸ್ವರ ಘಂಟಾಮಂಟಪದ ಲೋಕಾರ್ಪಣೆ, ಕಲಾ ಸನ್ಮಾನ 17ಕ್ಕೆ

Published 13 ಫೆಬ್ರುವರಿ 2024, 13:44 IST
Last Updated 13 ಫೆಬ್ರುವರಿ 2024, 13:44 IST
ಅಕ್ಷರ ಗಾತ್ರ

ಸಿದ್ದಾಪುರ: ‘ಶಿವಮೊಗ್ಗದ ಸಮಾನಸ ಸಂಸ್ಥೆಯು ಇಲ್ಲಿನ ಶೃಂಗೇರಿ ಶಂಕರಮಠದ ಸಹಯೋಗದೊಂದಿಗೆ ಫೆ.17ರಂದು ಸಪ್ತಸ್ವರ ಘಂಟಾಮಂಟಪದ ಲೋಕಾರ್ಪಣೆ, ಕಲಾ ಸನ್ಮಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶಂಕರಮಠದಲ್ಲಿ ಹಮ್ಮಿಕೊಂಡಿದೆ’ ಎಂದು ಸಂಸ್ಥೆಯ ಸಂಚಾಲಕ ವಿಘ್ನೇಶ ಭಟ್ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 10 ಗಂಟೆಗೆ ಸಪ್ತಸ್ವರ ಘಂಟಾಮಂಟಪವನ್ನು ಶ್ರೀಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ ಲೋಕಾರ್ಪಣೆ ಮಾಡುವರು’ ಎಂದರು.

‘ಯಕ್ಷಗಾನದ ಪ್ರಸಿದ್ಧ ಕಲಾವಿದ ಕಲಗದ್ದೆ ನಾಟ್ಯಗಣಪತಿ ದೇವಸ್ಥಾನದ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಅವರಿಗೆ ‘ರಂಗ ಮಹಾಬಲ’ ಬಿರುದು ನೀಡಿ ಗೌರವಿಸಲಾಗುವುದು. ವಿಶೇಷ ಅತಿಥಿಗಳಾಗಿ ಲಂಡನ್ ಭಾರತೀಯ ವಿದ್ಯಾಭವನದ ನಿರ್ದೇಶಕ ಮತ್ತೂರು ನಂದಕುಮಾರ, ಶಿಕ್ಷಣ ತಜ್ಞ ಬೆಂಗಳೂರಿನ ಹೆಬ್ರಾನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರೀನಂದ್ ಪ್ರೇಮಚಂದ್ರನ್ ಪಾಲ್ಗೊಳ್ಳಲಿದ್ದು, ಶಂಕರಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ ಅಧ್ಯಕ್ಷತೆ ವಹಿಸುವರು’ ಎಂದು ಹೇಳಿದರು.

‘ಈ ಸಂದರ್ಭದಲ್ಲಿ ಸಮಾನಸ ಸಂಸ್ಥೆಯ ಸಹಸಂಚಾಲಕಿ ಸುಮಿತ್ರಾ ಭಟ್ ರಚಿಸಿದ ‘ನೆನಪು ಮಾಸುವ ಮುನ್ನ’ ಕೃತಿ ಬಿಡುಗಡೆ ಮಾಡಲಾಗುವುದು. ಮಧ್ಯಾಹ್ನ 2.30ರಿಂದ ಕಲಗದ್ದೆ ಶಂಭುಶಿಷ್ಯ ಯಕ್ಷಗಾನ ಪ್ರತಿಷ್ಠಾನದಿಂದ ರಾವಣ ವಧೆ ಮತ್ತು ಶ್ರೀ ರಾಮವಿಜಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ’ ಎಂದರು.

‘ಹಿಂದೂಸ್ಥಾನಿ ಸಂಗೀತದ  ದಿಗ್ಗಜ ಪಂ. ವೆಂಕಟೇಶ ಗೋಡ್ಖಿಂಡಿ ಅವರ ಸಲಹೆಯಂತೆ ದೇಶದ ಹಲವೆಡೆ ಸುತ್ತಿ, ಸಪ್ತಸ್ವರ  ನಿನಾದಿಸುವ ಘಂಟೆಗಳನ್ನು ಹುಡುಕಿತಂದು ಸರಸ್ವತಿ ಮೂರ್ತಿಯೊಂದಿಗೆ  ಮಂಟಪದಲ್ಲಿ ಅಳವಡಿಸಲಾಗಿದೆ. ಶೃಂಗೇರಿ ಶಾರದಾಪೀಠದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿ ದಿವ್ಯ ಆಶೀರ್ವಾದದೊಂದಿಗೆ ನನ್ನ ಹಾಗೂ ಸುಮಿತ್ರಾ ಭಟ್ ಅವರ ಪ್ರಾಯೋಜಕತ್ವದಲ್ಲಿ ಇದನ್ನು ಶಂಕರಮಠದಲ್ಲಿ ನಿರ್ಮಿಸಲಾಗಿದೆ’ ಎಂದರು.

ದೊಡ್ಮನೆ ವಿಜಯ ಹೆಗಡೆ, ಭಾಸ್ಕರ ಹೆಗಡೆ ಮುತ್ತಿಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT