ಕಾರವಾರ: 'ತೌಕ್ತೆ' ಚಂಡಮಾರುತದ ಅಬ್ಬರವು ಉತ್ತರ ಕನ್ನಡದ ಕರಾವಳಿಯಲ್ಲಿ ಹಲವು ಕಷ್ಟ ನಷ್ಟಗಳನ್ನು ಉಂಟುಮಾಡಿದೆ. ಪ್ರಸಿದ್ಧ ಯಾತ್ರಾ ಸ್ಥಳ ಮತ್ತು ಪ್ರವಾಸಿ ತಾಣವೂ ಆಗಿರುವ ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಲ್ಲಿ ಅರಬ್ಬಿ ಸಮುದ್ರದ ಅಲೆಗಳು ಹಲವು ಗೂಡಂಗಡಿಗಳನ್ನು ಬಾಧಿಸಿವೆ. ದಡದಲ್ಲಿ ನಿಲ್ಲಿಸಿದ್ದ ಗೂಡಂಗಡಿಗಳು ಅಲೆಗಳ ಹೊಡೆತದಿಂದ ನೀರು ಪಾಲಾಗದಂತೆ ತಡೆಯಲು ಅವುಗಳ ಮಾಲೀಕರು ಹರಸಾಹಸ ಪಡಬೇಕಾಯಿತು. ಅಲ್ಲೇ ಸಮೀಪದಲ್ಲಿ ಲಂಗರು ಹಾಕಲಾಗಿದ್ದ ಮೀನುಗಾರಿಕಾ ದೋಣಿಗಳೂ ಅಲೆಗಳ ಹೊಡೆತಕ್ಕೆ ಸಿಲುಕಿದ್ದವು. ಮೀನುಗಾರರು ಅವುಗಳನ್ನು ಮತ್ತಷ್ಟು ಬಿಗಿಯಾಗಿ ಲಂಗರು ಹಾಕಲು ಪರದಾಡುತ್ತಿದ್ದುದು ಕಂಡುಬಂತು.