ಶಿರಸಿ: ವೃತ್ತಿ ಜೀವನದಲ್ಲಿ ನಿವೃತ್ತಿ ಸಹಜ ಪ್ರಕ್ರಿಯೆ. ನಿವೃತ್ತಿಯ ನಂತರವೂ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ ಹೇಳಿದರು.
ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ, 39 ವರ್ಷ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಮಾರುಕಟ್ಟೆ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ರಘು ಕಾನಡೆ, 32 ವರ್ಷ ಕಾರ್ಯನಿರ್ವಹಿಸಿ ನಿವೃತ್ತರಾದ ಗ್ರಾಮೀಣ ಠಾಣೆಯ ಹೆಡ್ ಕಾನಸ್ಟೇಬಲ್ ಶಿವಾನಂದ ನಾಯ್ಕ ಅವರನ್ನು ಸನ್ಮಾನಿಸಿ, ಅವರು ಮಾತನಾಡಿದರು.
ಸಿಪಿಐ ಪ್ರದೀಪ ಬಿ.ಯು ಮಾತನಾಡಿ, ‘ವೃತ್ತಿ ಜೀವನದಲ್ಲಿ ಪ್ರತಿ ವ್ಯಕ್ತಿಯೂ ನಿವೃತ್ತಿ ಹೊಂದುತ್ತಾನೆ. ಆದರೆ, ನಿವೃತ್ತಿ ನಂತರ ಆರಿಸಿಕೊಳ್ಳುವ ಕ್ಷೇತ್ರ ಬಹು ಮುಖ್ಯವಾಗುತ್ತದೆ’ ಎಂದರು. ಇದೇ ವೇಳೆ ನಗರ ಅಪರಾಧ ವಿಭಾಗದ ಪಿಎಸ್ಐ ಉಮೇಶ ಪಾವಸ್ಕರ ಉಪಸ್ಥಿತರಿದ್ದರು. ಮಾರುಕಟ್ಟೆ ಠಾಣೆ ಪಿಎಸ್ಐ ನಾಗಪ್ಪ ಸ್ವಾಗತಿಸಿದರು.