ಕಾರವಾರ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ವತಿಯಿಂದ ಎರಡು ವರ್ಷಕ್ಕೊಮ್ಮೆ ಕೊಡ ಮಾಡುವ ‘ಸುನ್ನಿ ಸಾಹಿತ್ಯ ಪ್ರಶಸ್ತಿ’ಗೆ ಲೇಖಕ, ಅನುವಾದಕ ಸ್ವಾಲಿಹ್ ತೋಡಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಫೆ.9 ರಿಂದ 11ರ ವರೆಗೆ ಭಟ್ಕಳದ ತಾಲ್ಲೂಕು ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಸಾಹಿತ್ಯೋತ್ಸವ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಿಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ತೋಡಾರ್ ಗ್ರಾಮದ ಸ್ವಾಲಿಹ್ ಸುನ್ನಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡದಲ್ಲಿ 45ಕ್ಕೂ ಅಧಿಕ ಕೃತಿಗಳನ್ನು ಬರೆದಿರುವ ಅವರು, ಇಂಗ್ಲೀಷ್ನ ಖ್ಯಾತ ಲೇಖಕ ಮಾರ್ಟಿನ್ ಲಿಂಗ್ಸ್ ಅವರ ‘ಮುಹಮ್ಮದ್’ ಎನ್ನುವ ಬೃಹತ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಎಸ್.ಎಸ್.ಎಫ್. ರಚಿಸಿದ್ದ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಅಬ್ದುಲ್ ಹಮೀದ್ ಬಜ್ಪೆ, ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಹಾಗೂ ಜಿ.ಎಂ. ಕಾಮಿಲ್ ಸಖಾಫಿ ಅವರಿದ್ದ ಆಯ್ಕೆ ಸಮಿತಿ ಸ್ವಾಲಿಹ್ ಅವರ ಹೆಸರನ್ನು ಈ ಪ್ರಶಸ್ತಿಗೆ ಅಂತಿಮಗೊಳಿಸಿದೆ.