ಕಾರವಾರ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಬೆಳಗಿನ ಜಾವದಿಂದ ಆಗಾಗ ಜೋರಾಗಿ ಮಳೆಯಾಗುತ್ತಿದೆ. ಹೊನ್ನಾವರ ತಾಲ್ಲೂಕಿನ ಮಂಕಿ ಬಣಸಾಲೆಯಲ್ಲಿ ಹೊಳೆಯ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿವೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಸ್ಥಳಕ್ಕೆ ಹೊನ್ನಾವರ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾರವಾರ, ಶಿರಸಿಯಲ್ಲೂ ಆಗಾಗ ಜೋರಾಗಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶದಲ್ಲಿರುವ ರಸ್ತೆಗಳು, ನಿವೇಶನಗಳಲ್ಲಿ ನೀರು ನಿಂತಿದೆ.
ಕೆಲವು ದಿನಗಳ ಹಿಂದೆ ಕಾಳಿ ನದಿಯ ಪ್ರವಾಹದಿಂದ ಹಾನಿಗೀಡಾದ ಕಾರವಾರ ತಾಲ್ಲೂಕಿನ ಕದ್ರಾ, ಮಲ್ಲಾಪುರ ಭಾಗದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಪರಿಶೀಲನೆ ನಡೆಸಲಿದ್ದಾರೆ. ಈ ಮೊದಲು ನಿಗದಿಯಾಗಿದ್ದ ಕುಮಟಾ ಪ್ರವಾಸವನ್ನು ಮೊಟಕುಗೊಳಿಸಲಾಗಿದೆ.