ಕುಮಟಾ: ಕಳೆದ ಕೆಲ ವರ್ಷಗಳಿಂದ ನಿಯಂತ್ರಣಕ್ಕೆ ಬಾರದ ಸಮೀಪದ ವನ್ನಳ್ಳಿಯ ಸಿಹಿ ಈರುಳ್ಳಿಗಂಟಿದ ಹಾವು ಸುಳಿ ರೋಗ ಈಗ ಬೆಳೆಗಾರರಲ್ಲಿ ಹತಾಶೆ ಮೂಡಿಸಿದೆ.
ಪ್ರತೀ ವರ್ಷ ನೂರಾರು ಕ್ವಿಂಟಲ್ ಸಿಹಿ ಈರುಳ್ಳಿ ಬೆಳೆಯುವ ರೈತರಿಗೆ ಉತ್ತಮ ಆದಾಯ ಬರುತ್ತಿತ್ತು. ಆದರೆ ಕೆಲ ವರ್ಷಗಳಿಂದ ಈರುಳ್ಳಿಗೆ ಅಂಟಿದ ಹಾವು ಸುಳಿ ರೋಗದ ವಿರುದ್ಧ ನಡೆಸುವ ಹೋರಾಟದಲ್ಲಿ ರೈತರು ಹಾನಿ ಅನುಭವಿಸುತ್ತಿದ್ದಾರೆ. ವನ್ನಳ್ಳಿಯ ಈರುಳ್ಳಿ ಬೆಳೆಗಾರ ಬಾಬು ನಾಯ್ಕ ಎನ್ನುವವರು ತಮ್ಮ ಗದ್ದೆಯಲ್ಲಿ ನೆಟ್ಟ ಸಸಿ ಬೆಳೆಯುವ ಮುನ್ನವೇ ಅವು ರೋಗಕ್ಕೀಡಾಗಿದ್ದು, ಕಿತ್ತು ಹಾಕಿ ಅಲ್ಲಿ ಬೆಂಡೆ ಕಾಯಿ ಬೆಳೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಮಾಹಿತಿ ನೀಡಿದ ಅವರು, ‘ಪ್ರತೀ ವರ್ಷವೂ ಈರುಳ್ಳಿ ಸಸಿಯ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ವರ್ಷ ಹಾನಿ ಅನುಭವಿಸಿದರೂ ಈ ವರ್ಷವಾದರೂ ಬೆಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಸಸಿ ನೆಟ್ಟರೆ ಈ ವರ್ಷ ಸಸಿ ಬೆಳೆಯುವ ಮುನ್ನವೇ ರೋಗಕ್ಕೀಡಾಗಿದೆ’ ಎಂದರು.
ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಈರುಳ್ಳಿ ಸಸಿ ನೆಟ್ಟ ಪ್ರಗತಿಪರ ಕೃಷಿಕ ನಾಗೇಶ ನಾಯ್ಕ, ‘ಈರುಳ್ಳಿಗೆ ಯುರಿಯಾ ಬಳಸದೆ ಅದಕ್ಕೆ ಅಗತ್ಯವಿರುವ ಬೋರಿಯಂ ದ್ರಾವಣ ಹಾಗೂ ಸುಫಲಾ ಗೊಬ್ಬರ ಹಾಕಿ ನೆಟ್ಟ ಸಸಿಗಳು ಆರಂಭದಲ್ಲಿ ಚೆನ್ನಾಗಿ ಬಂದರೂ ಈಗ ಒಂದು ಬದಿಯಿಂದ ರೋಗಕ್ಕೀಡಾಗುತ್ತಿದೆ. ಸಸಿ ನೆಡಲು ಖರ್ಚು ಮಾಡಿದ ₹50 ಸಾವಿರ ಮೈಮೇಲೆ ಬರುತ್ತಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಸಮಸ್ಯೆ ನಿವಾರಿಸಲು ಮುಂದಾಗಬೇಕಿದೆ’ ಎಂದರು.
ಹಿರಿಯ ತೋಟಗಾರಿಕಾ ನಿರ್ದೇಶಕ ಚೇತನ ನಾಯ್ಕ, ‘ಪ್ರತೀ ವರ್ಷ ಭತ್ತದ ಕಟಾವು ಆದ ಗದ್ದೆಯ ತೇವಾಂಶ ಆರಲು ಒಂದು ತಿಂಗಳು ಬಿಡುವು ಕೊಡುತ್ತಿದ್ದರು. ಈಗ ಅಕಾಲಿಕ ಮಳೆೆಯಿಂದ ಗದ್ದೆಯ ತೇವಾಂಶ ಆರುತ್ತಿಲ್ಲ. ಭತ್ತದ ಕಟಾವು ಆದ ನಂತರ ಹಸಿ ನೆಲದಲ್ಲಿ ಈರುಳ್ಳಿ ಬೆಳೆಯಲು ಮುಂದಾಗುವ ರೈತರು ರೋಗ ಎದುರಿಸುವಂತಾಗಿದೆ. ರೈತರಿಗೆ ರೋಗ ರಹಿತ ಈರುಳ್ಳಿ ಬೀಜ ಪೂರೈಸಲು ತೋಟಗಾರಿಕಾ ವಿ.ವಿಗೆ ಮನವಿ ಮಾಡಲಾಗಿದೆ. ಪ್ರತೀ ವರ್ಷ ರೈತರು ಈರುಳ್ಳಿ ಬಿತ್ತನೆ ಮೊದಲು ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿದರೆ ಕ್ರಮ ಕೈಗೊಳ್ಳಬಹುದು. ಇನ್ಮುಂದೆ ಮುಂಜಾಗ್ರತಾ ಕ್ರಮ ಕೈಗೊಂಡ ನಂತರವೇ ಬಿತ್ತನೆ ಬಗ್ಗೆ ಯೋಚಿಸುವುದು ಉತ್ತಮ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.