ಹೊಸಪೇಟೆ (ವಿಜಯನಗರ): ‘ಕರ್ನಾಟಕ ರಕ್ಷಣಾ ವೇದಿಕೆ ಯಾವ ಸರ್ಕಾರದ ಮುಂದೆಯೂ ಕೈಕಟ್ಟಿ ನಿಲ್ಲುವುದಿಲ್ಲ. ಸದಾ ವಿರೋಧ ಪಕ್ಷದ ಮಾದರಿಯಲ್ಲಿ ಕೆಲಸ ಮಾಡುತ್ತ ನಾಡು, ನುಡಿಯ ವಿಷಯದಲ್ಲಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತದೆ’ ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ನೂತನ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗರು ಸಾರ್ವಭೌಮತ್ವ ಹೊಂದುವ ಉದ್ದೇಶದಿಂದ ಕಳೆದ 25 ವರ್ಷಗಳಿಂದ ಸಾಮಾಜಿಕ ಹೋರಾಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ನಾಡು ನುಡಿ, ಗಡಿ, ಕನ್ನಡಿಗರಿಗೆ ಉದ್ಯೋಗ, ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಹೋರಾಟಗಳನ್ನು ಮಾಡಲಾಗುತ್ತಿದೆ. ಅದೇ ರೀತಿ ನೂತನ ಜಿಲ್ಲೆಯಾಗಿ ಘೋಷಣೆಯಾದ ಐತಿಹಾಸಿಕ ಹಿನ್ನೆಲೆಯ ವಿಜಯನಗರದಲ್ಲೂ ಹೋರಾಟಗಳು ಮುಂದುವರಿಯುತ್ತವೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ನೂತನ ಸದಸ್ಯರಿಗೆ ಸನ್ಮಾನಿಸಲಾಯಿತು. ಮಹಿಳಾ ಘಟಕದ ಉಪಾಧ್ಯಕ್ಷೆ ಅಶ್ವಿನಿ ಗೌಡ, ಬಿ.ಸಣ್ಣ ಈರಪ್ಪ, ಸಂಗೀತಾ ಶೆಟ್ಟಿ, ಸಚಿನ್ ಗಾಣಿಗೇರ, ಜಿಲ್ಲಾ ಘಟಕದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಕವಿರಾಜ್ ಅರಸ್, ಗುಜ್ಜಲ ನಾಗರಾಜ, ಸ್ವಸ್ತಿಕ್ ನಾಗರಾಜ್ ಇದ್ದರು.