ಶನಿವಾರ ಸಂಜೆಯೇ ವಿವಿಧ ಕಡೆಗಳಿಂದ ಅಪಾರ ಭಕ್ತರು ಹಂಪಿಗೆ ಬಂದು ತಂಗಿದ್ದರು. ಭಾನುವಾರ ಬೆಳಕು ಹರಿಯುತ್ತಿದ್ದಂತೆ ಮೈಕೊರೆಯುವ ಚಳಿಯಲ್ಲಿ ಜನ ತುಂಗಭದ್ರೆಯಲ್ಲಿ ಮಿಂದೆದ್ದರು. ಅನಂತರ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದರು. ಎಳ್ಳು, ಬೆಲ್ಲ ವಿನಿಮಯ ಮಾಡಿಕೊಂಡು ಪರಸ್ಪರ ಶುಭ ಕೋರಿದರು. ಬಳಿಕ ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಂಡು, ಜೊತೆಗೆ ತಂದಿದ್ದ ಬುತ್ತಿ ತೆಗೆದು ಆಹಾರ ಸವಿದರು.