ಹೊಸಪೇಟೆ (ವಿಜಯನಗರ): ‘ನೇಹಾ ಹಿರೇಮಠ ಹತ್ಯೆ ನಡೆದ ತಕ್ಷಣ ಮುಖ್ಯಮಂತ್ರಿ ಸಹಿತ ಕೆಲವರು ನೀಡಿದ ಹೇಳಿಕೆಗಳಿಂದ ಪಕ್ಷಕ್ಕೆ ಸ್ವಲ್ಪ ಇರಿಸು ಮುರಿಸು ಆಗಿದ್ದು ನಿಜವಾದರೂ, ಅವರೆಲ್ಲ ಈಗ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ. ಹೀಗಾಗಿ ಪಕ್ಷಕ್ಕೆ ಯಾವುದೇ ಹಾನಿಯೂ ಆಗುವುದಿಲ್ಲ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೈ.ಎನ್.ಗೌಡರ್ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೇಹಾ ಅವರ ಪೋಷಕರಲ್ಲಿ ಸ್ವತಃ ಮುಖ್ಯಮಂತ್ರಿ ಅವರು ಮಾತನಾಡಿದ್ದಾರೆ, ನೇಹಾ ತಂದೆ ಸಹ ತನಿಖೆಯ ಪ್ರಗತಿಯ ಬಗ್ಗೆ ಸಮಾಧಾನಗೊಂಡಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯೇ ಆಗಬೇಕು ಎಂಬುದು ಪಕ್ಷದ ನಿಲುವು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದರು.
‘ದೇಶದಲ್ಲಿ ಎಲ್ಲ ಬಡವರು, ದಲಿತರು, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರನ್ನು ಸಮವಾಗಿ ನೋಡುವ ಪಕ್ಷ ಎಂದರೆ ಅದು ಕಾಂಗ್ರೆಸ್. ಹೀಗಾಗಿ ಸಮ ಸಮಾಜ ಸ್ಥಾಪನೆಯಲ್ಲಿ ಭರವಸೆ ಹೊಂದಿರುವ ಕಾಂಗ್ರೆಸ್ನ ಲೋಕಸಭೆ ಅಭ್ಯರ್ಥಿ ಈ.ತುಕಾರಾಂ ಅವರನ್ನು ಗೆಲ್ಲಿಸಬೇಕು’ ಎಂದು ಅವರು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.
ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕ ಅಧ್ಯಕ್ಷ ಪಿ.ರತ್ನಾಕರ, ಮದರ್ಸಾಬ್ ಸಿಂಗನಹಳ್ಳಿ, ರೈತ ಸಂಘದ ಘಂಟೆ ಸೋಮಶೇಖರ್, ಘಂಟೆ ಸುರೇಶ, ಎಚ್.ಸೋಮಶೇಖರ್ ಇದ್ದರು.