ಹೊಸಪೇಟೆ (ವಿಜಯನಗರ): ನಿಗಮ, ಮಂಡಳಿಗಳು, ಪ್ರಾಧಿಕಾರಗಳ ಅಧ್ಯಕ್ಷರ ನೇಮಕ ಮಾಡಿದ ರಾಜ್ಯ ಸರ್ಕಾರದ ಎರಡನೇ ಪಟ್ಟಿ ಹೊರಬಿದ್ದಿದ್ದು, ವಿಜಯನಗರ ಜಿಲ್ಲೆಯ ಒಬ್ಬರಿಗೂ ಈ ಪಟ್ಟಿಯಲ್ಲೂ ಸ್ಥಾನ ದೊರೆಯದೆ ಇರುವುದು ಕಾಂಗ್ರೆಸ್ ಕಾರ್ಯಕರ್ತರ ನಿರಾಸೆಗೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆಯ ಇಬ್ಬರಿಗೆ ಅವಕಾಶ ಸಿಕ್ಕಿದೆ, ಆದರೆ ವಿಜಯನಗರ ಜಿಲ್ಲೆಯ ಒಬ್ಬರಿಗೂ ಅವಕಾಶ ಸಿಕ್ಕಿಲ್ಲ. ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದರು. ಅವರೆಲ್ಲ ಈಗ ಹತಾಶರಾಗಿದ್ದಾರೆ.
‘ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಿರ್ಲಕ್ಷ್ಯ ಹಾಗೂ ಕಾರ್ಯಕರ್ತರ ಕಡೆಗಣನೆಯ ಫಲವೇ ಇದು. ಮೊದಲ ಪಟ್ಟಿಯಲ್ಲೂ ಜಿಲ್ಲೆಯ ಯಾವ ಶಾಸಕರಿಗೂ ಅವಕಾಶ ಸಿಗಲಿಲ್ಲ. ಇದರಿಂದ ಲೋಕಸಭಾ ಚುನಾವಣೆಯ ಮೇಲೆ ದುಷ್ಪರಿಣಾಮ ಬೀರುವುದು ನಿಶ್ಚಿತ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೊದಲ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಎರಡನೇ ಪಟ್ಟಿಯಲ್ಲಿ ಜಿಲ್ಲೆಯ ಕನಿಷ್ಠ ಒಬ್ಬರಿಗಂತೂ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ಇನ್ನು ಲೋಕಸಭಾ ಚುನಾವಣೆಯ ಬಳಿಕವಷ್ಟೇ ‘ಹುಡಾ’ ಅಧ್ಯಕ್ಷರ ನೇಮಕವಾದೀತು. ಅದರಿಂದ ತಪ್ಪು ಸಂದೇಶ ರವಾನೆಯಾಗುವ ಅಪಾಯ ಇದೆ’ ಎಂದು ಅವರು ಹೇಳಿದರು.