ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ವಾರಾಂತ್ಯ ಕರ್ಫ್ಯೂಗೆ ಶನಿವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದ್ವಿಚಕ್ರ ವಾಹನಗಳಲ್ಲಿ ಸಾರ್ವಜನಿಕರ ಓಡಾಟ ಎಂದಿನಂತೆಯೇ ಸಾಮಾನ್ಯವಾಗಿತ್ತು. ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ಅಗತ್ಯ ವಸ್ತುಗಳಾದ ಮೆಡಿಕಲ್ ಶಾಪ್ , ತರಕಾರಿ, ಹಣ್ಣಿನ, ಕಿರಾಣಿ ಅಂಗಡಿಗಳು ತೆರೆದಿದ್ದವು.
ಬಸವೇಶ್ವರ ವೃತ್ತದ ಬಳಿ ಪೊಲೀಸರು ವಾಹನಗಳ ತಪಾಸಣೆ ನಡೆಸಿದರು, ಮಾಸ್ಕ್ ಧರಿಸದವರಿಗೆ ಸ್ಥಳದಲ್ಲೆ ದಂಡ ವಿಧಿಸಿದರು. ಬಸ್ ಗಳು ಸಂಚರಿಸಿದವು, ಆದರೆ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ಕೆಲ ಬಸ್ ಗಳು ಹೊಸಪೇಟೆ ಮತ್ತು ದಾವಣಗೆರೆ ಕಡೆಗೆ ಬೆರಳೆಣಿಕೆಯಷ್ಟು ಪ್ರಯಾಣಿಕರೊಂದಿಗೆ ತೆರಳುತ್ತಿದ್ದುದ್ದು ಸಾಮಾನ್ಯವಾಗಿತ್ತು. ಅನಾವಶ್ಯಕವಾಗಿ ಓಡಾಡುತ್ತಿದ್ದ ಕೆಲವರಿಗೆ ಪೊಲೀಸರು ದಂಡ ಹಾಕುವ ಮೂಲಕ ಚುರುಕು ಮುಟ್ಟಿಸಿದರು. ಆದರೂ ಓಡಾಟ ನಡೆದೇ ಇತ್ತು.