ಹೊಸಪೇಟೆ(ವಿಜಯನಗರ): ದೇವದಾಸಿ ಪದ್ಧತಿ ನಿರ್ಮೂಲನೆ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸುವ ಕಾಯ್ದೆ ಜಾರಿಗೆ ಒತ್ತಾಯಿಸಿ ಕುಷ್ಟಗಿಯ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ನಡೆಸುತ್ತಿರುವ ರಾಜ್ಯಮಟ್ಟದ ಜನಜಾಗೃತಿ ಕಲಾ ಜಾಥಾ ಮಂಗಳವಾರ ನಗರ ತಲುಪಿತು.
ನಗರದಲ್ಲಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಬಳಿಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಜಾಥಾ ನಡೆಸಿ, ನಂತರ ಅಲ್ಲಿ ‘ಪ್ರತಿಧ್ವನಿ’ ಕಲಾತಂಡದವರು ‘ದೇವರಿಗೆ ಸವಾಲು’ ಬೀದಿನಾಟಕ ಪ್ರದರ್ಶಿಸಿದರು.
‘ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪರಿಣತರಿಂದ ತಯಾರಿಸಿದ 2018ರ ದೇವದಾಸಿ ಪದ್ಧತಿ ನಿಷೇಧ ವರದಿಯನ್ನು ಜಾರಿಗೊಳಿಸಬೇಕು. ಪೋಷಕರು ಹಾಗೂ ದೇವದಾಸಿ ಪದ್ಧತಿ ಶೋಷಣೆಗೆ ಒಳಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆಗೆ ತಿದ್ದುಪಡಿ ಮಾಡಬೇಕು’ ಎಂದು ಆಗ್ರಹಿಸಿದರು.
‘ಸಮಾನತೆ’ ಟ್ರಸ್ಟ್ ಸಂಚಾಲಕ ರಾಮಚಂದ್ರ, ಕಾರ್ಯದರ್ಶಿ ಎನ್.ಹುಲಿಗೆಮ್ಮ, ಖೈರುನ್ನಿಸಾಮ ದಲಿತ ಸಂಘರ್ಷ ಸಮಿತಿಯ ಎ.ಬಸವರಾಜ್, ವಿಜಯಕುಮಾರ್, ಮಾರೇಶ್, ಉದಯ್ ಕುಮಾರ್, ಬೀದಿ ನಾಟಕದ ನಿರ್ದೇಶಕ ಎಂ.ಆರ್.ಬೇರಿ, ಚಂದಾಲಿಂಗ ಕಲಾಲಬಂಡಿ, ಚೌಡಕೆ ಪದಗಳ ಗಾಯಕಿ ರಾಮವ್ವ ಜೋಗತಿ, ಭಾಗ್ಯವ್ವ ಇದ್ದರು.