ಹೊಸಪೇಟೆ (ವಿಜಯನಗರ): ‘ಹೊಸಪೇಟೆಯನ್ನು ನನ್ನ ಹೃದಯಲ್ಲಿ ಇಟ್ಟುಕೊಂಡಿದ್ದೇನೆ, ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡುತ್ತೇನೆ’ ಎಂದು ವರ್ಷದ ಹಿಂದೆ ಚುನಾವಣಾ ಪ್ರಚಾರ ಸಭೆಯಲ್ಲಿ ಭರವಸೆ ನೀಡಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ನಗರಕ್ಕೆ ಬಂದಿದ್ದು, ಸಿಎಂ ಆದ ನಂತರದ ಎರಡನೇ ಬಜೆಟ್ನಲ್ಲೂ ಜಿಲ್ಲೆಯನ್ನು ಮರೆತೇ ಬಿಟ್ಟಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಇದೊಂದು ಹೊಸ ಜಿಲ್ಲೆ, ಗಣಿ ಬಾಧಿತ ಜಿಲ್ಲೆಯೂ ಹೌದು. ಹೊಸಪೇಟೆ ನಗರದ ಶೇ 50ಕ್ಕಿಂತ ಅಧಿಕ ಪ್ರದೇಶ ಕೊಳೆಗೇರಿಯಾಗಿದೆ. ವಸತಿ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದ್ದ ಒಂದೇ ಒಂದು ಸಕ್ಕರೆ ಕಾರ್ಖಾನೆ ಕಣ್ಮುಚ್ಚಿ 8 ವರ್ಷ ಕಳೆಯಿತು. ಸರ್ಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಬೇಡಿಕೆಗೆ ಸ್ಪಂದನೆಯೇ ಇಲ್ಲ. ಬರಗಾಲ ಜಿಲ್ಲೆಯನ್ನು ಹಿಂಡಿ ಹಿಪ್ಪೆ ಮಾಡಿದೆ. ಹೀಗಿದ್ದರೂ ಮುಖ್ಯಮಂತ್ರಿಗಳ ಹೃದಯ ಜಿಲ್ಲೆಗಾಗಿ ಏಕೆ ಕರಗಲಿಲ್ಲವೋ ಗೊತ್ತಾಗಲಿಲ್ಲ’ ಎಂದು ವಿಜಯನಗರ ನಾಗರಿಕ ವೇದಿಕೆಯ ಅಧ್ಯಕ್ಷ ವೈ.ಯಮುನೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರವಾಸಿಗರನ್ನು ಅದರಲ್ಲೂ ಮುಖ್ಯವಾಗಿ ವಿದೇಶಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಹಂಪಿಯ ಸಮಗ್ರ ಅಭಿವೃದ್ಧಿಗೆ ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು. ಹಲವು ಇಲಾಖೆಗಳ ಹಿತಾಸಕ್ತಿ ಸಂಘರ್ಷ, ಕಾನೂನು ತೊಡಕುಗಳಿಂದಾಗಿ ಇಲ್ಲಿ ಮೂಲಸೌಲಭ್ಯ ವ್ಯವಸ್ಥೆ ಮಾಡಲು ಕಾಲಹರಣ ನಡೆಯುತ್ತಿದೆ. ಮುಖ್ಯಮಂತ್ರಿ ಅವರು ಮನಸ್ಸು ಮಾಡಿದರೆ ಇದು ಕಷ್ಟವಲ್ಲ’ ಎಂದು ಹಂಪಿ ನಿವಾಸಿ ಪ್ರಭುರಾಜ್ ಹೇಳಿದರು.
ಇಎಸ್ಐ ಆಸ್ಪತ್ರೆ ಇಲ್ಲ:
‘ನಗರದ ಕಾರಿಗನೂರಿಲ್ಲಿದ್ದ ಇಎಸ್ಐ ಆಸ್ಪತ್ರೆ ಮುಚ್ಚಿ 15 ವರ್ಷ ಕಳೆಯಿತು. ಮತ್ತೆ ಆರಂಭಿಸಬೇಕೆಂಬ ಹೋರಾಟಕ್ಕೆ ಈವರೆಗೆ ಫಲ ಸಿಕ್ಕಿಲ್ಲ. ಹೊಸಪೇಟೆ ನಗರದಲ್ಲಿ ಸಂಘಟಿತ, ಅಸಂಘಟಿತ ಕಾರ್ಮಿಕರ ಸಂಖ್ಯೆ ಸುಮಾರು 1 ಲಕ್ಷದಷ್ಟಿದೆ. ಸರ್ಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಆರಂಭಕ್ಕೂ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ನಾವು ಮತ್ತೆ ಹೋರಾಟ ನಡೆಸಲಿದ್ದೇವೆ’ ಎಂದು ಸಿಪಿಎಂ ನಾಯಕ ಭಾಸ್ಕರ ರೆಡ್ಡಿ ಹೇಳಿದರು.
‘ಜಿಲ್ಲಾ ಉಸ್ತುವಾರಿ ಸಚಿವರು ಈ ಜಿಲ್ಲೆಯನ್ನು ಸರ್ಕಾರದಲ್ಲಿ ಪ್ರತಿನಿಧಿಸುವ ಪ್ರಮುಖ ವ್ಯಕ್ತಿ. ಬಜೆಟ್ನಲ್ಲಿ ಅನುದಾನ ಇಲ್ಲ, ನಿಗಮ, ಮಂಡಳಿಗಳಲ್ಲಿ ಸಹ ಜಿಲ್ಲೆಯ ಪಕ್ಷದ ಕಾರ್ಯಕರ್ತರಿಗೆ ಬೆಲೆ ಇಲ್ಲದಿರುವುದನ್ನು ಕಂಡಾಗ ಉಸ್ತುವಾರಿ ಸಚಿವರ ಬದ್ಧತೆ, ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತದೆ. ವಾಸ್ತವ ಅರಿಯುವ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕು’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.
ಕನ್ನಡ ವಿವಿ: ಎತ್ತಿಗೆ ಜ್ವರ ಎಮ್ಮೆಗೆ ಬರೆ
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಖ್ಯಮಂತ್ರಿ ಅವರಿಗೆ ಆಪ್ತರಾಗಿದ್ದ ಕುಲಪತಿಯವರ ಕಾಲದಲ್ಲಿ ಹಣಕಾಸಿನ ಹಗರಣ ನಡೆದಿತ್ತು ಎಂಬ ಆರೋಪ ಇದೆ. ಅದಿನ್ನೂ ವಿಚಾರಣೆ ಹಂತದಲ್ಲಿದೆ. ಅದರ ನೆಪ ಇಟ್ಟುಕೊಂಡು ವಿದ್ಯುತ್ ಬಿಲ್ಗೂ ಅನುದಾನ ನೀಡದಂತಹ ಕಠೋರ ನಿಲುವನ್ನು ಸರ್ಕಾರ ಮತ್ತು ಅಧಿಕಾರಿಗಳು ತಳೆದಿದ್ದಾರೆ. ಎಷ್ಟೇ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸದೆ ಇರುವುದಕ್ಕೆ ಈ ಭಾಗದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.