ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: 9ವರ್ಷದ ಬಾಲಕನ ಸಾವಿನ ಕೇಸ್‌: ಶರಣಂ ಆಸ್ಪತ್ರೆಗೆ ತಾತ್ಕಾಲಿಕ ಬೀಗಮುದ್ರೆ

ಕೆಪಿಎಂಇ ಕಾಯ್ದೆ ಉಲ್ಲಂಘನೆ ಸಾಬೀತು ಹಿನ್ನೆಲೆ: ಡಿಎಚ್‌ಒ ಆದೇಶ
Published 22 ಮೇ 2024, 15:46 IST
Last Updated 22 ಮೇ 2024, 15:46 IST
ಅಕ್ಷರ ಗಾತ್ರ

ಹೊಸಪೇಟೆ: ಒಂಬತ್ತು ವರ್ಷದ ಬಾಲಕನ ಸಾವಿಗೆ ಸಂಬಂಧಿಸಿ ನಗರದ ಶರಣಂ ಆಸ್ಪತ್ರೆ ಕೆಪಿಎಂಇ ಕಾಯ್ದೆ ಉಲ್ಲಂಘಿಸಿದೆ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಅವರು ಆದೇಶ ನೀಡಿದ್ದಾರೆ.

‘ಗೌತಮ್‌ ಎಂಬ ಬಾಲಕನ ಅನುಮಾನಾಸ್ಪದ ಸಾವಿಗೆ ಕಾರಣವಾದ ಶರಣಂ ಆಸ್ಪತ್ರೆಯು ಕೆಪಿಎಂಇ ಕಾಯ್ದೆ ಉಲ್ಲಂಘಿಸಿದೆ. ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಿ ವರದಿ ನೀಡಲು ತಾಲ್ಲೂಕು ಆರೋಗ್ಯಾಧಿಕಾರಿ ಅವರಿಗೆ ಆದೇಶಿಸಲಾಗಿದೆ’ ಎಂದು ಡಿಎಚ್ಒ ಡಾ.ಎಲ್‌.ಆರ್.ಶಂಕರ್ ನಾಯ್ಕ್ ಆದೇಶದಲ್ಲಿ ತಿಳಿಸಿದ್ದಾರೆ.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಭಾಸ್ಕರ್ ಅವರು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಿನಯ ರಾಘವೇಂದ್ರ ಎಚ್‌. ಅವರಿಗೆ ಪತ್ರ ಬರೆದಿದ್ದು, ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಮುಚ್ಚಲು ಅನುವು ಮಾಡಿಕೊಡುವ ಸಲುವಾಗಿ ಯಾವುದಾದರೂ ಒಳರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಅವರನ್ನು ತಕ್ಷಣ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಿದ್ದಾರೆ.

ಹಿನ್ನೆಲೆ: ತಾಲ್ಲೂಕಿನ ತಾಳೆ ಬಸಾಪುರ ತಾಂಡಾದ ಗೌತಮ್  ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಮೊದಲಿಗೆ ಮರಿಯಮ್ಮನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಾಲಕನಿಗೆ ಡೆಂಗಿ ದೃಢಪಟ್ಟ ಕಾರಣ ಶರಣಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 8ರಂದು ಬೆಳಿಗ್ಗೆ ಬಾಲಕನ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ಅವನನ್ನು ಬಳ್ಳಾರಿಗೆ ಕರೆದೊಯ್ಯಲು ವೈದ್ಯರು ತಿಳಿಸಿದರು. ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವ ಹೊತ್ತಿನಲ್ಲಿ ನಗರ ದಾಟುವ ಮೊದಲೇ ಬಾಲಕ ಮೃತಪಟ್ಟಿದ್ದ. ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ಆರೋಪಿಸಿ ಸಂಬಂಧಿಕರು ಅದೇ ದಿನ ಆಸ್ಪತ್ರೆ ಮುಂಭಾಗ ಬಾಲಕನ ಶವ ಇಟ್ಟು ಪ್ರತಿಭಟನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT