ಹೊಸಪೇಟೆ (ವಿಜಯನಗರ): ನೂರು ಅಡಿ ಎತ್ತರದ ಎರಡು ಧ್ವಜ ಸ್ತಂಭಗಳಲ್ಲಿ ಭಾನುವಾರ ಬೆಳಿಗ್ಗೆ ತ್ರಿವರ್ಣ ಧ್ವಜಾರೋಹಣ ಮಾಡಲಾಯಿತು.
ನಗರ ಹೊರವಲಯದ ಜೋಳದ ರಾಶಿ ಗುಡ್ಡದಲ್ಲಿ ಹೊಸದಾಗಿ ನಿರ್ಮಿಸಿರುವ ಧ್ವಜ ಸ್ತಂಭದಲ್ಲಿ ಸಚಿವ ಆನಂದ್ ಸಿಂಗ್ ಅವರ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್ ಧ್ವಜಾರೋಹಣ ಮಾಡಿದರು.
ನಗರದ ರೋಟರಿ ವೃತ್ತದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ ಧ್ವಜಾರೋಹಣ ನೆರವೇರಿಸಿ, ಅನೇಕ ಜನ ಸ್ವಾತಂತ್ರ್ಯ ಹೋರಾಟಗಾರ ತ್ಯಾಗದಿಂದ ಸ್ವಾತಂತ್ರ್ಯ ದೊರೆತಿದೆ. ಅವರ ತ್ಯಾಗ, ಬಲಿದಾನ ಸದಾ ನೆನಪಿನಲ್ಲಿ ಇಟ್ಟುಕೊಂಡು, ದೇಶದ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ನಗರದ ರೈಲು ನಿಲ್ದಾಣದಲ್ಲಿ ನಿರ್ಮಿಸಿರುವ ನೂರು ಅಡಿ ಎತ್ತರದ ಹೊಸ ಧ್ವಜ ಸ್ತಂಭದಲ್ಲಿ ತಾಂತ್ರಿಕ ಕಾರಣಗಳಿಂದ ಧ್ವಜಾರೋಹಣ ಸಾಧ್ಯವಾಗಲಿಲ್ಲ. ಹೀಗಾಗಿ ಅದರ ಬದಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.