ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಜನತೆ ಆತಂಕ ದೂರ; ಗೊಂದಲ ನಿವಾರಿಸಿದ ಗೆಜೆಟ್‌ ಅಧಿಸೂಚನೆ

ಗೆಜೆಟ್‌ ಅಧಿಸೂಚನೆ ಹೊರಡಿಸಿ ಗೊಂದಲ ನಿವಾರಿಸಿದ ರಾಜ್ಯ ಸರ್ಕಾರ
Last Updated 25 ಫೆಬ್ರುವರಿ 2021, 12:39 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಯ ನಂತರ ನೂತನ ವಿಜಯನಗರ ಜಿಲ್ಲೆಗೆ ಕಲ್ಯಾಣ ಕರ್ನಾಟಕದ ಎಲ್ಲ ಸವಲತ್ತುಗಳು ಕೈತಪ್ಪಿ ಹೋಗಲಿವೆ ಎಂಬ ಆತಂಕ ಇದೀಗ ದೂರವಾಗಿದೆ.

ರಾಜ್ಯ ಸರ್ಕಾರವು ಗುರುವಾರ (ಫೆ.25) ಈ ಸಂಬಂಧ ಅಧಿಕೃತ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ. ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಈ ಹಿಂದಿನಂತೆ ಸಂವಿಧಾನದ 371 (ಜೆ) ಸೌಲಭ್ಯ ಅನ್ವಯಿಸಲಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ದೊರಕಲಿದೆ.

ಇಷ್ಟೇ ಅಲ್ಲ, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಎಲ್ಲ ಸವಲತ್ತುಗಳು ಹೊಸ ಜಿಲ್ಲೆಗೆ ಅನ್ವಯಿಸಲಿವೆ. ಶಿಕ್ಷಣ ಸಂಸ್ಥೆಗಳಿಗೂ ಈ ಹಿಂದಿನಂತೆಯೇ ಕಲ್ಯಾಣ ಕರ್ನಾಟಕದ ಸೌಲಭ್ಯಗಳು ದಕ್ಕಲಿವೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

‘ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ಸೌಲಭ್ಯ ಹೊಸ ಜಿಲ್ಲೆಗೆ ಅನ್ವಯಿಸಿ ಸರ್ಕಾರ ಆದೇಶ ಹೊರಡಿಸಿರುವುದು ಅಭಿನಂದನಾರ್ಹ. ಈ ವಿಶೇಷ ಸೌಲಭ್ಯದಿಂದ ಈ ಭಾಗದ ಯುವಕ/ಯುವತಿಯರಿಗೆ ಸಾಕಷ್ಟು ಪ್ರಯೋಜನವಾಗಲಿದೆ’ ಎಂದು ಸಂಶೋಧನಾ ವಿದ್ಯಾರ್ಥಿ ರಮೇಶ ಹೇಳಿದರು.

ಏಕೆ ಮೂಡಿತು ಗೊಂದಲ?

ವಿಶಾಲ ಬಳ್ಳಾರಿ ಜಿಲ್ಲೆ ವಿಭಜನೆಯ ಸಂದರ್ಭದಲ್ಲಿ ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಒಂದುವೇಳೆ ಹೊಸದಾಗಿ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದರೆ ಅದಕ್ಕೆ ಕಲ್ಯಾಣ ಕರ್ನಾಟಕದ ಎಲ್ಲ ಸೌಲಭ್ಯಗಳು ಕೈತಪ್ಪಿ ಹೋಗಲಿವೆ ಎನ್ನುವ ವಿಷಯ ಹರದಾಡಿತ್ತು. ಇದು ವಿಜಯನಗರ ಜಿಲ್ಲಾ ವ್ಯಾಪ್ತಿ ತಾಲ್ಲೂಕುಗಳ ಜನರ ಆತಂಕಕ್ಕೆ ಕಾರಣವಾಗಿತ್ತು.

ಈ ವಿಷಯವಾಗಿ ಖುದ್ದು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಹಲವು ಸಲ ಹೇಳಿಕೆ ನೀಡಿದ್ದರು. ‘ಹೊಸ ಜಿಲ್ಲೆ ರಚನೆಯಿಂದ ಈ ಹಿಂದಿನ ಯಾವ ಸೌಲಭ್ಯಗಳು ಹೋಗುವುದಿಲ್ಲ. ಕಲಬುರ್ಗಿ ಜಿಲ್ಲೆಯಿಂದ ಯಾದಗಿರಿ ವಿಭಜನೆಗೊಂಡರೂ ಅದಕ್ಕೆ ಈ ಹಿಂದಿನಂತೆಯೇ ಎಲ್ಲ ಸವಲತ್ತುಗಳು ಸಿಗುತ್ತಿವೆ. ಅದರಂತೆಯೇ ವಿಜಯನಗರಕ್ಕೂ ಸಿಗಲಿವೆ’ ಎಂದಿದ್ದರು. ಈಗ ಅವರ ಮಾತು ನಿಜವಾಗಿದೆ.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು

ಬೀದರ್‌

ಕಲಬುರ್ಗಿ

ಯಾದಗಿರಿ

ರಾಯಚೂರು

ಕೊಪ್ಪಳ

ಬಳ್ಳಾರಿ

ವಿಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT