ಹೊಸಪೇಟೆ (ವಿಜಯನಗರ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಾಲ್ಲೂಕಿನ ಕಮಲಾಪುರದ ಡಾ.ಬಿ.ಆರ್. ಅಂಬೇಡ್ಕರ್ ಕಾಲೊನಿಯ ಹಿರಾಳ್ ಕೊಲ್ಲಾರಪ್ಪ ಮನೆಯಲ್ಲಿ ಉಪಾಹಾರ ಸಿದ್ಧವಾಗುತ್ತಿದೆ.
ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಸಿ.ಎಂ. ಪರಿಶಿಷ್ಟರ ಕಾಲೊನಿ ಭೇಟಿ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಅದೇ ಕಾಲೊನಿಯ ಕೊಲ್ಲಾರಪ್ಪ ಮನೆಯಲ್ಲಿ ಉಪಾಹಾರ ಸೇವಿಸುವರು.
ಸಿ.ಎಂ. ಅವರಿಗೆ ಕೊಲ್ಲಾರಪ್ಪ ಮಕ್ಕಳಾದ ರೇಣುಕಾ, ಹುಲಿಗೆಮ್ಮ, ಅಂಬಮ್ಮ ಅವರು ಉಪಾಹಾರ ತಯಾರಿಸುತ್ತಿದ್ದಾರೆ.ಮಂಡಕ್ಕಿ ವಗ್ಗರಣೆ, ಉಪ್ಪಿಟ್ಟು, ಕೇಸರಿಬಾತ್, ಮಿರ್ಚಿ, ಚಹಾ ಮಾಡುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸಿ.ಎಂ. ಭೇಟಿ ನೀಡಲಿದ್ದು, ಈಗಾಗಲೇ ಕೊಲ್ಲಾರಪ್ಪ ಮನೆ ಎದುರು ಕಾಲೊನಿಯ ಜನ ಅವರ ಸ್ವಾಗತಕ್ಕೆ ಕಾದು ನಿಂತಿದ್ದಾರೆ. ಸೇರಿದ್ದಾರೆ. ಸಿ.ಎಂ. ಜತೆಗೆ ಶಾಸಕ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಇತರೆ ಮುಖಂಡರು ಆಗಮಿಸುವರು.
'ಮುಖ್ಯಮಂತ್ರಿ ನಮ್ಮನೆಗೆ ಬರುತ್ತಿರುವುದು ಖುಷಿಯ ವಿಚಾರ. ಉಪಾಹಾರ ಬಹುತೇಕ ಸಿದ್ಧವಾಗಿದೆ. ನಮ್ಮಂಥ ಬಡವರ ಮನೆಗೆ ಅವರು ಬರುತ್ತಿರುವುದು ನಮ್ಮ ಭಾಗ್ಯ' ಎಂದು ರೇಣುಕಾ ಹೇಳಿದರು.