ಕೊಟ್ಟೂರು: ಕಳೆದ ಎರಡು ದಶಗಳ ಹಿಂದೆ ಆರಂಭಗೊಂಡ ಪಾದಯಾತ್ರೆಯು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ಆಗಮಿಸುವ ಭಕ್ತರ ಸೇವೆಗಾಗಿ ಸೇವಾರ್ಥಿಗಳ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ.
ಭಕ್ತವೃಂದಕ್ಕೆ ಊಟೋಪಚಾರ, ವಸತಿ ಸೌಲಭ್ಯ, ವೈದ್ಯಕೀಯ ಸೌಕರ್ಯ ಇತ್ಯಾದಿಗಳನ್ನು ಮಾಡುವುದರಿಂದ ನಾವೂ ಸತ್ಕಾರ್ಯದಲ್ಲಿ ತೊಡಗಿದಂತಾಗುತ್ತದೆ ಎಂಬ ಮನೋಭಾವ ಸೇವಾರ್ಥಿಗಳಲ್ಲಿದೆ.
ಪಾದಯಾತ್ರೆ ಮೂಲಕ ಸ್ವಾಮಿಯ ಸ್ಮರಣೆ ಮಾಡುತ್ತಾ ಸಾಗಿ ಬಂದ ಭಕ್ತರು, ಪಟ್ಟಣದ ದ್ವಾರಬಾಗಿಲು ಸಮೀಪಿಸುತ್ತಿದ್ದಂತೆ ಕರ್ಪೂರ ಬೆಳಗಿಸಿ ಸ್ವಾಮಿಗೆ ಜೈಕಾರ, ಘೋಷಣೆಗಳೊಂದಿಗೆ ಧನ್ಯತಾಭಾವದಿಂದ ಹರ್ಷಿತರಾಗುತ್ತಾರೆ.
‘ಕಳೆದ 8 ವರ್ಷಗಳಿಂದ ಶಿವಮೊಗ್ಗದಿಂದ ಪಾದಯಾತ್ರೆಯಲ್ಲಿ ಬರುವ ನನಗೆ ಒಳ್ಳೆಯದಾಗಿದ್ದು, ನನ್ನ ಇಷ್ಟಾರ್ಥಗಳೆಲ್ಲಾ ನೆರವೇರಿವೆ’ ಎಂದು ಸಂತೋಷ್ ಹೇಳುತ್ತಾರೆ.
‘ಅನಾರೋಗ್ಯದಿಂದ ಬಳಲುತ್ತಿದ್ದಾಗ ಉತ್ತಮ ಆರೋಗ್ಯ ಕರುಣಿಸಿದರೆ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದು ಸ್ವಾಮಿಗೆ ಬೇಡಿಕೊಂಡಿದ್ದೆ. ಬಳಿಕ ಆರೋಗ್ಯವಾಗಿದ್ದರಿಂದ ದಾವಣಗೆರೆಯಿಂದ ಕೊಟ್ಟೂರಿಗೆ ಕಳೆದ 6 ವರ್ಷಗಳಿಂದ ಕಾಲ್ನಡಿಗೆಯಲ್ಲಿ ಬರುತ್ತಿದ್ದೇನೆ’ ಎಂದು ಗೀತಾ ಹೇಳಿದರು.
ಕಳೆದ ವರ್ಷ ಜರುಗಿದ ರಥೋತ್ಸವ ಚಿತ್ರ
ಪ್ರಾಧಿಕಾರ ರಚಿಸಲು ಭಕ್ತರ ಮನವಿ
ರಥೋತ್ಸವ ಕಾರ್ತಿಕೋತ್ಸವಗಳು ಹಾಗೂ ಅಮವಾಸ್ಯೆ ಸಂದರ್ಭಗಳಲ್ಲಿ ಆಗಮಿಸುವ ಭಕ್ತರಿಗೆ ಇನ್ನೂ ಹೆಚ್ಚಿನ ಯಾತ್ರಿ ನಿವಾಸಗಳು ಹಾಗೂ ಮೂಲ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಲು ಮುಂದಾದಲ್ಲಿ ಭಕ್ತ ಸಮೂಹಕ್ಕೆ ಅನುಕೂಲವಾಗುತ್ತದೆ. ಸರ್ಕಾರ ಕೆಲವೊಂದು ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ಪ್ರಾಧಿಕಾರ ರಚಿಸಿದಂತೆ ಕೊಟ್ಟೂರಿಗೂ ಅಂತಹದೊಂದು ಪ್ರಾಧಿಕಾರ ರಚಿಸಿ ಅನುದಾನವನ್ನು ಮಂಜೂರು ಮಾಡಿದಲ್ಲಿ ಶ್ರೀಕ್ಷೇತ್ರ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಭಕ್ತರಾದ ರಾಣಿಬೆನ್ನೂರಿನ ಬಸವರಾಜಪ್ಪನವರ ಹೇಳಿದರು.