ಹೊಸಪೇಟೆ (ವಿಜಯನಗರ): ಹಂಪಿಗೆ ಬುಧವಾರವೂ ಭಕ್ತರ ದಂಡು ಹರಿದು ಬಂದಿತ್ತು.
ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು ವಿರೂಪಾಕ್ಷೇಶ್ವರ, ಪಂಪಾಂಬಿಕೆ ಹಾಗೂ ಭುವನೇಶ್ವರಿಯ ದರ್ಶನ ಪಡೆದರು. ಬೆಳಿಗ್ಗೆ ಕೊರೆಯುವ ಚಳಿಯಲ್ಲೇ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿದರು. ದೇವರ ದರ್ಶನ ಪಡೆದು, ಸ್ಮಾರಕಗಳನ್ನು ಕಣ್ತುಂಬಿಕೊಂಡು ಅವರ ಊರುಗಳಿಗೆ ಹಿಂತಿರುಗಿದರು.
ಮಂಗಳವಾರ ಸಂಜೆ ನಡೆದ ಕಾರ್ತಿಕ ದೀಪೋತ್ಸವ ಹಾಗೂ ರಾತ್ರಿ ನಡೆದ ಫಲಪೂಜಾ ಮಹೋತ್ಸವ ಕಣ್ತುಂಬಿಕೊಳ್ಳಲು ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಕೊಪ್ಪಳ, ಗದಗ ಸೇರಿದಂತೆ ಹಲವೆಡೆಯಿಂದ ನೂರಾರು ಜನ ಬಂದಿದ್ದರು.
ಕೋದಂಡರಾಮ ದೇವಸ್ಥಾನದ ಬಳಿ ರಾತ್ರಿ ನಡೆದ ವಿರೂಪಾಕ್ಷೇಶ್ವರ–ಪಂಪಾಂಬಿಕೆಯ ನಿಶ್ಚಿತಾರ್ಥ ಕಾರ್ಯಕ್ರಮ ಕಣ್ತುಂಬಿಕೊಂಡು ಭಕ್ತರು ಅಲ್ಲಿಯೇ ತಂಗಿದ್ದರು. ಬೆಳಿಗ್ಗೆ ಬೇರೆಡೆಗಳಿಂದ ಜನ ದರ್ಶನಕ್ಕೆ ಬಂದಿದ್ದರು. ಇದರಿಂದಾಗಿ ಹೆಚ್ಚಿನ ಜನದಟ್ಟಣೆ ಇತ್ತು. ನದಿ ಸ್ನಾನಘಟ್ಟ, ರಥಬೀದಿಯಲ್ಲಿ ಜನಜಾತ್ರೆ ಇತ್ತು.