ಹೊಸಪೇಟೆ (ವಿಜಯನಗರ): ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಿಟ್ಟು 50 ವರ್ಷ ಸಂದಿದ ಹಿನ್ನೆಲೆಯಲ್ಲಿ ಹಂಪಿಯಲ್ಲಿ ‘ಕರ್ನಾಟಕ ಸಂಭ್ರಮ–50’ ಜ್ಯೋತಿ ರಥಯಾತ್ರೆ ನಡೆದು ನಾಲ್ಕು ತಿಂಗಳಾಗಿವೆ. ಆದರೆ, ಅದರಲ್ಲಿ ಪಾಲ್ಗೊಂಡ ಕಲಾವಿದರಿಗೆ ಇನ್ನೂ ಗೌರವಧನ ಸಿಕ್ಕಿಲ್ಲ.
ನವೆಂಬರ್ 2ರಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮತ್ತು ಹಲವು ಸಚಿವರು ಪಾಲ್ಗೊಂಡಿದ್ದರು. ಡೊಳ್ಳುಕುಣಿತ, ಹಗಲುವೇಷ ಸಹಿತ ಹಲವು ಪ್ರಕಾರಗಳ 50ಕ್ಕೂ ಹೆಚ್ಚು ಜಾನಪದ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
‘ಇಂತಹ ಉತ್ಸವಗಳಿಂದ ಕಲಾವಿದರಿಗೆ ಕೊಂಚ ಮಟ್ಟದ ದುಡಿಮೆ ಆಗುತ್ತದೆ. ನಾಲ್ಕು ತಿಂಗಳಾದರೂ ಗೌರವಧನ ಸಿಗದ ಕಾರಣ ಅವರು ಈಗ ಸಂಕಷ್ಟದಲ್ಲಿದ್ದಾರೆ. ಹಂಪಿ ಉತ್ಸವದಲ್ಲಿ ಪಾಲ್ಗೊಂಡ ಕಲಾವಿದರಿಗೂ ಗೌರವಧನ ಸಿಕ್ಕಿಲ್ಲ’ ಎಂದು ಸಿದ್ದರಾಮೇಶ್ವರ ಕಲಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ವಿರೂಪಾಕ್ಷ ವಿ.ಹಂಪಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕರ್ನಾಟಕ ಸಂಭ್ರಮ–50 ಕಾರ್ಯಕ್ರಮ ಮತ್ತು ಹಂಪಿ ಉತ್ಸವದ ಕಲಾವಿದರಿಗೆ ಗೌರವಧನ ವಿತರಣೆ ವಿಳಂಬವಾಗಿದ್ದು ನಿಜ. ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಮನಕ್ಕೆ ತರಲಾಗಿದೆ. ಗೌರವಧನ ಶೀಘ್ರವೇ ಬಿಡುಗಡೆಯಾಗುವ ವಿಶ್ವಾಸ ಇದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.