ಹೊಸಪೇಟೆ (ವಿಜಯನಗರ): ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಅವರಿಗೆ ಹೊಣೆಗಾರಿಕೆಯೂ ದೊಡ್ಡದಿದೆ. ಹಿರಿಯ ಪತ್ರಕರ್ತರು ಕಿರಿಯರಿಗೆ ಮಾದರಿಯಾಗಿ ಇರುವ ಅಗತ್ಯ ಇದೆ ಎಂದು ಹೊಸಪೇಟೆಯ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ರಮೇಶ್ ಬಾಬು ಬಿ.ಎನ್.ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮೂರನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ಚೈತ್ರ ಜೆ. ಮಾತನಾಡಿ, ಧೈರ್ಯ ಮತ್ತು ಸತ್ಯಕ್ಕೆ ನಿಷ್ಠರಾಗಿ ನಡೆಯುವುದು ಪತ್ರಿಕಾ ರಂಗಕ್ಕೆ ಪ್ರವೇಶಿಸುವವರು ಮೈಗೂಡಿಸಿಕೊಳ್ಳಬೇಕಾದ ಗುಣಗಳು. ತಮ್ಮ ಸ್ಥಾನಮಾನಕ್ಕೆ ಧಕ್ಕೆ ಬರದಂತೆ ಪತ್ರಕರ್ತರು ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ ಎಂದರು.
ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಕರುಣಾನಿಧಿ ವಿಶೇಷ ಉಪನ್ಯಾಸ ನೀಡಿದರು. ಪತ್ರಕರ್ತರಿಗೆ ಅಭದ್ರತೆ ಭಾವನೆ ಮೂಡಿದರೆ ಅವರಿಂದ ಸಮರ್ಪಕ ಕೆಲಸ ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದರು.
ಕೋರ್ಟ್ ನೀಡುವ ತೀರ್ಪು ಮತ್ತು ನಿರ್ಣಯಕ್ಕೆ ಇರುವ ವ್ಯತ್ಯಾಸ, ನ್ಯಾಯಾಂಗ ನಿಂದನೆ, ಪತ್ರಕರ್ತರಿಗೂ ಸ್ವಾತಂತ್ರ್ಯ ಸಹಿತ ಹಲವು ವಿಚಾರಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ, ರಾಜ್ಯ ಸಮಿತಿ ಸದಸ್ಯ ಪಿ. ವೆಂಕೋಬ ನಾಯಕ ಇದ್ದರು. ಪಾಲ್ಗೊಂಡ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.