ಹೊಸಪೇಟೆ: ಇಲ್ಲಿಗೆ ಸಮೀಪದ ಗುಂಡಾ ಅರಣ್ಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಸ್ಟಿಯರಿಂಗ್ ವೀಲ್ ತುಂಡಾಗಿ ಇನ್ನೊಂದು ರಸ್ತೆಗೆ ನುಗ್ಗಿದ ಟ್ರಕ್ ಕಾರೊಂದಕ್ಕೆ ಡಿಕ್ಕಿ ಹೊಡೆದು ಕೆಳಗೆ ಉರುಳಿ ಬಿದ್ದಿದ್ದು, ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಒಂದು ಅದೇ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.
ಹೊಸಪೇಟೆ ಕಡೆಯಿಂದ ಚಿತ್ರದುರ್ಗ ಕಡೆಗೆ ತೆರಳುತ್ತಿದ್ದ ಟ್ರಕ್ನ ಸ್ಟಿಯರಿಂಗ್ ವಿಲ್ ತುಂಡಾಗಿ ಅದು ರಸ್ತೆ ವಿಭಜಕ ದಾಟಿಕೊಂಡು ಇನ್ನೊಂದು ಬದಿಯ ರಸ್ತೆಗೆ ನುಗ್ಗಿತ್ತು. ಅದೇ ವೇಳೆ ಹರಪನಹಳ್ಳಿ ಕಡೆಯಿಂದ ಹೊಸಪೇಟೆಯತ್ತ ಮಹೇಂದ್ರ ಎಸ್ಯುವಿ 300 ವಾಹನ ಬರುತ್ತಿತ್ತು. ಟ್ರಕ್ ಈ ವಾಹನಕ್ಕೆ ಗುದ್ದಿ ಮತ್ತೆ ಮುಂದಕ್ಕೆ ಹೋಗಿ ಗುಂಡಿಗೆ ಮಗುಚಿ ಬಿತ್ತು. ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್ ಎಸ್ಯುವಿಗೆ ಡಿಕ್ಕಿ ಹೊಡೆಯಿತು. ಹೀಗಾಘಿ ಕಾರಿನಲ್ಲಿದ್ದ ಎಲ್ಲಾ ಏಳು ಮಂದಿ ಮೃತಪಟ್ಟರು.
ಮೃತರೆಲ್ಲ ಹೊಸಪೇಟೆಯ ಉಕ್ಕಡಕೇರಿಯವರು. ಇವರು ಮಗುವಿನ ಜವಳ (ಕೂದಲು ತೆಗೆಸುವ ಶಾಸ್ತ್ರ) ಮಾಡಿಸುವ ಸಲುವಾಗಿ ಕುಟುಂಬ ಸಮೇತ ಹರಪನಹಳ್ಳಿ ತಾಲ್ಲೂಕಿನ ಕೂಲಳ್ಳಿ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುತ್ತಿದ್ದರು.
ಮೃತಪಟ್ಟವರಲ್ಲಿ ಮೂವರು ಪುರುಷರು, ಮೂವರು ಮಹಿಳೆಯರು ಹಾಗೂ 5 ವರ್ಷದ ಹೆಣ್ಣು ಮಗು ಸೇರಿದೆ.
ಮೃತರನ್ನು ಕೆಂಚವ್ವ (60), ಭಾಗ್ಯಮ್ಮ (32), ಗೋಣಿಬಸಪ್ಪ (55), ಗಿರಿಜಾ (45), ಭೀಮಲಿಂಗಪ್ಪ (60), ಅನಿಲ್ (28) ಮತ್ತು ಈವನ್ (8) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಎರಡೂ ಲಾರಿಗಳ ಚಾಲಕರಿಗೆ ಗಾಯವಾಗಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಶ್ರೀಹರಿಬಾಬು ಬಿ.ಎಲ್. ತೆರಳಿದ್ದು, ಹೆದ್ದಾರಿಯಲ್ಲಿ ಉಂಟಾಗಿದ್ದ ವಾಹನ ದಟ್ಟಣೆಯನ್ನು ನಿವಾರಿಸಲು ಕ್ರಮ ಕೈಗೊಂಡರು.