ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಪಿಯು ವಿದ್ಯಾರ್ಥಿಗಳ ರಾಜ್ಯಮಟ್ಟದ ಬಾಲ್‌ ಬ್ಯಾಡ್ಮಿಂಟನ್‌

Published 9 ಡಿಸೆಂಬರ್ 2023, 7:22 IST
Last Updated 9 ಡಿಸೆಂಬರ್ 2023, 7:22 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಪುನೀತ್‌ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಪದವಿಪೂರ್ವ ಕಾಲೇಜುಗಳ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ಇಂದು ಬೆಳಿಗ್ಗೆ ಆರಂಭಗೊಂಡಿದ್ದು, ಮೊದಲ ಸುತ್ತಿನ ಪಂದ್ಯಗಳ ಬಳಿಕ ಬಾಲಕರ ಆರು ಹಾಗೂ ಬಾಲಕಿಯರ ಐದು ತಂಡಗಳು ಸೋತು ಕೂಟದಿಂದ ನಿರ್ಗಮಿಸಿವೆ.

ಬಾಲಕರ ವಿಭಾಗದಲ್ಲಿ ಹಾಸನ, ಕಲಬುರಗಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಮತ್ತು ಕೋಲಾರ ತಂಡಗಳಿಗೆ ಸೋಲು ಉಂಟಾದರೆ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ, ಬಳ್ಳಾರಿ, ಬೆಳಗಾವಿ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ತಂಡಗಳು ಮೊದಲ ಸುತ್ತಿನಲ್ಲೇ ಸೋತಿವೆ.

ಒಟ್ಟು ಆರು ಅಂಕಣಗಳಲ್ಲಿ ಪಂದ್ಯಗಳು ಏಕಕಾಲಕ್ಕೆ ನಡೆಯುತ್ತಿದ್ದು, ಪ್ರತಿಯೊಂದು ತಂಡದಲ್ಲಿ ತಲಾ ಐದು ಮಂದಿ ಸೆಣಸಾಟ ನಡೆಸುತ್ತಿದ್ದಾರೆ. 

ಬೆಳಿಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಫಾಲಾಕ್ಷ ಟಿ. ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.

ದೂರದ ಜಿಲ್ಲೆಗಳಿಂದ ಶುಕ್ರವಾರ ಸಂಜೆಯೇ ಕ್ರೀಡಾಪಟುಗಳು ಇಲ್ಲಿಗೆ ಬಂದಿದ್ದರೆ, ವಿಜಯನಗರ ಜಿಲ್ಲೆಗೆ ಸಮೀಪದ ಜಿಲ್ಲೆಗಳ ಕ್ರೀಡಾಪಟುಗಳು ಹಾಗೂ ಅವರ ಮಾರ್ಗದರ್ಶಕರು ಶನಿವಾರ ಬೆಳಿಗ್ಗೆ ಬಂದರು. ಕೆಲವು ತಂಡಗಳು ಗೈರು ಹಾಜರಾಗಿರುವುದು ಸಹ ಕಂಡಿದ್ದು, 33 ತಂಡಗಳ ಪೈಕಿ ಹೆಚ್ಚಿನ ತಂಡಗಳು ಪಂದ್ಯಾವಳಿಗೆ ಹಾಜರಾಗಿವೆ.

ನಗರದಲ್ಲಿ ಹಾಸ್ಟೆಲ್‌ ಸೌಲಭ್ಯ ಇರುವ ಹಲವು ಕಾಲೇಜುಗಳಲ್ಲಿ ಹಾಗೂ ಇತರ ಸುಸಜ್ಜಿತ ಕಾಲೇಜುಗಳಲ್ಲಿ ಕ್ರೀಡಾಪಟುಗಳಿಗೆ ಊಟ, ವಸತಿಯ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಸಂಜೆ ಫೈನಲ್‌ ಪಂದ್ಯಗಳು ಹಾಗೂ ಬಹುಮಾನ ವಿತರಣೆ ನಡೆಯಲಿವೆ.

ನಗರದ ವಿಜ್ಞಾನ್‌ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಈ ಕ್ರೀಡಾಕೂಟ ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT