ಹೊಸಪೇಟೆ (ವಿಜಯನಗರ): ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವ ಸಂಸದ ಅನಂತಕುಮಾರ ಹೆಗಡೆ ಅವರ ಅಣಕು ಶವಯಾತ್ರೆಯನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಇಲ್ಲಿ ಮಾಡಲಾಯಿತು.
ನಗರದ ವಡಕರಾಯನ ಗುಡಿಯಿಂದ ಹೊರಟ ಅಣಕು ಶವಯಾತ್ರೆ, ದೊಡ್ಡ ಮಸೀದಿ, ಮಹಾತ್ಮ ಗಾಂಧಿ ವೃತ್ತ, ಕೇಂದ್ರ ಬಸ್ ನಿಲ್ದಾಣ, ಡಾ.ಪುನೀತ್ ರಾಜಕುಮಾರ್ ವೃತ್ತ ಮೂಲಕ ತಾಲ್ಲೂಕು ಕಚೇರಿಯವರೆಗೆ ನಡೆಯಿತು.
ಹೆಗಡೆ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಲಾಗಿತ್ತು ಹಾಗೂ ಬಿಜೆಪಿ ಪಕ್ಷದ ಕಮಲ ಚಿಹ್ನೆಯನ್ನು ತಲೆಕೆಳಗಾಗಿ ಮುದ್ರಿಸಲಾಗಿತ್ತು. ಶವಯಾತ್ರೆಯ ವೇಳೆ ಮಾಡುವ ರೀತಿಯಲ್ಲೇ ಸಿಡಿಮದ್ದು ಸಿಡಿಸುತ್ತ, ರಸ್ತೆಯುದ್ದಕ್ಕೂ ಅರಳನ್ನು ಚೆಲ್ಲುತ್ತ ಮೆರವಣಿಗೆ ನಡೆಸಲಾಯಿತು.
ಶವಯಾತ್ರೆಯ ಕೊನೆಯಲ್ಲಿ ಅನಂತಕುಮಾರ್ ಹೆಗಡೆ ಅವರ ಪ್ಲೆಕ್ಸ್ಗೆ ಮೊಟ್ಟೆ ಎಸೆದು ಧಿಕ್ಕಾರ ಕೂಗಲಾಯಿತು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಮಾತನಾಡಿ, ‘ಅನಂತಕುಮಾರ್ ಹೆಗಡೆ ಬಹುವಚನದಲ್ಲಿ ಮಾತನಾಡಲು ಯೋಗ್ಯವಲ್ಲದ ವ್ಯಕ್ತಿ. ನೀನು ಇನ್ನೊಂದು ಬಾರಿ ಸಿದ್ದರಾಮಯ್ಯ ವಿರುದ್ಧ ಬಾಯಿ ಬಿಟ್ಟರೆ ವಿಜಯನಗರ ಜಿಲ್ಲೆಯ ಹೋಬಳಿ ಮತ್ತು ಗ್ರಾಮ ಮಟ್ಟಕ್ಕೆ ಈ ಪ್ರತಿಭಟನೆಯನ್ನು ವಿಸ್ತರಿಸಲಾಗುವುದು’ ಎಂದು ಎಚ್ಚರಿಸಿದರು.
‘ಮುಖ್ಯಮಂತ್ರಿ ವಿರುದ್ಧ ಮಾತನಾಡಿ, ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಯತ್ನಿಸುತ್ತಿರುವ ಅನಂತಕುಮಾರ್ ಹೆಗಡೆ ಅವರು ಮುಖ್ಯಮಂತ್ರಿ ಅವರ ಬಹಿರಂಗ ಕ್ಷಮೆ ಕೇಳಬೇಕು, ಸಂಸದ ಸ್ಥಾನದಿಂದ ವಜಾಮಾಡಿ ರಾಜ್ಯದಿಂದ ಗಡಿಪಾರು ಮಾಡಬೇಕು’ ಎಂದು ಅವರು ಒತ್ತಾಯಿಸಿದರು.
ಬಳಿಕ ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಮೂಲಕ ರಾಜ್ಯಪಾಲರಿಗೆ ಮನವಿ ಕಳುಹಿಸಿಕೊಡಲಾಯಿತು.
ಪಕ್ಷದ ಮುಖಂಡರಾದ ರವಿಕುಮಾರ್, ರಾಮಕೃಷ್ಣ ನಿಂಬಗಲ್, ಎಚ್.ಮಹೇಶ್, ಬಿ.ತಾಯಪ್ಪ, ಭರತ್ ಕುಮಾರ್, ಮಂಜುಳಾ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.