ವಿಜಯನಗರ(ಹೊಸಪೇಟೆ): ‘ಭಾಷಾಂತರ ಎಂಬುದು ಒಂದು ಕೌಶಲ, ಕಲೆ. ಅನುಭವವಾದಂತೆ ಆ ಕೌಶಲ ಹೆಚ್ಚಾಗುತ್ತದೆ’ ಎಂದು ಸಾಹಿತಿ ಗುರುಮೂರ್ತಿ ಪೆಂಡಕೂರ್ ತಿಳಿಸಿದರು.
ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಕೇಂದ್ರ, ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಶುಕ್ರವಾರ ಏರ್ಪಡಿಸಿದ್ದ ಭಾಷಾಂತರ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
‘ಕನ್ನಡ ಕಾವ್ಯಗಳು ಸಂಸ್ಕೃತ ಕಾವ್ಯಗಳ ಭಾಷಾಂತರದ ಮೂಲಕವೇ ರಚನೆಯಾಗಿರುವುದನ್ನು ಕಾಣಬಹುದು. ಭಾಷಾಂತರ ಚಟುವಟಿಕೆ ಎನ್ನುವುದು ಎಲ್ಲ ಕಾಲಕ್ಕೂ ಅನ್ವಯವಾಗುವ ಪ್ರಕ್ರಿಯೆಯಾಗಿದೆ’ ಎಂದರು.
‘ಪ್ರತಿ 20 ಕಿ.ಮೀ ಅಂತರದಲ್ಲಿ ಭಾಷೆ ಬಳಕೆಯಲ್ಲಿ ಬದಲಾವಣೆಗಳು ಕಾಣಿಸುತ್ತದೆ. ಈ ವೈವಿಧ್ಯದ ಕಾರಣಕ್ಕಾಗಿ ಭಾಷಾಂತರವನ್ನು ಸಮಾನಾಂತರ ಪದಗಳ ಮೂಲಕ ಮಾಡಬಹುದಾಗಿದೆ. ಸಮಾನಾಂತರ ಪರಿಭಾಷೆಗಳು ಆಯಾ ಪ್ರದೇಶಗಳ ಹಿನ್ನೆಲೆಯಲ್ಲಿ ವಿಭಿನ್ನಾರ್ಥಗಳನ್ನು ಧ್ವನಿಸುತ್ತವೆ ಎಂಬ ಅರಿವು ಭಾಷಾಂತರಕಾರರಿಗೆ ಇರಬೇಕು’ ಎಂದು ಹೇಳಿದರು.
ಕುಲಸಚಿವ ಸುಬ್ಬಣ ರೈ, ‘ಪ್ರಸ್ತುತ ಕಮ್ಮಟದಿಂದ ವಿದ್ಯಾರ್ಥಿಗಳು ಭಾಷಾಂತರದ ಬಗೆಗಿನ ಪ್ರಾಥಮಿಕ ಜ್ಞಾನ ಪಡೆದು ಮುಂದೆ ಅದನ್ನು ವಿಸ್ತರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಎ. ಮಲ್ಲಿಕಾರ್ಜುನಪ್ಪ, ಡೀನ್ರಾದ ವೀರೇಶ್ ಬಡಿಗೇರ, ಕೆ. ರವೀಂದ್ರನಾಥ, ನಿರ್ದೇಶಕ ಮೋಹನ ಕುಂಟಾರ್, ಐಕ್ಯುಎಸಿ ಸಹಾಯಕ ನಿರ್ದೇಶಕ ಡಿ. ಪ್ರಭಾ ಇದ್ದರು.