ಹೊಸಪೇಟೆ (ವಿಜಯನಗರ): ಕೇಂದ್ರ ಉಕ್ಕು ಖಾತೆ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ಅವರು ಬುಧವಾರ ಸಂಜೆ ಹಂಪಿಗೆ ಭೇಟಿ ನೀಡಿದರು.
ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿರೂಪಾಕ್ಷನಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದರು. ಇದಕ್ಕೂ ಮುನ್ನ ಅವರಿಗೆ ದೇವಸ್ಥಾನದ ಆನೆ ಲಕ್ಷ್ಮಿ ಹೂಮಾಲೆ ಹಾಕಿ ಸ್ವಾಗತಿಸಿತು. ಪ್ರವಾಸಿ ಮಾರ್ಗದರ್ಶಿ ಮಂಜುನಾಥಗೌಡ ಅವರು ದೇಗುಲದ ಮಹತ್ವ ವಿವರಿಸಿದರು. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ್ ರಾವ್ ಇದ್ದರು. ಹಂಪಿ ಭೇಟಿಗೂ ಮೊದಲು ಸಚಿವರು ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿಯ ಜೆಎಸ್ಡಬ್ಲ್ಯೂ ವಾಯುನೆಲೆಗೆ ಬಂದಿಳಿದರು. ಬಳಿಕ ನೇರ ಹಂಪಿಗೆ ಬಂದರು.
ಮೂರು ದಿನ ಜೆಎಸ್ಡಬ್ಲ್ಯೂ ಅತಿಥಿ ಗೃಹದಲ್ಲಿ ತಂಗಲಿರುವ ಸಚಿವರು, ಉಕ್ಕು ಘಟಕ, ಕ್ರೀಡಾ ಸಮುಚ್ಚಯ, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ಎಂಡಿಸಿ), ಕುಮಾರಸ್ವಾಮಿ ಗಣಿ ಪ್ರದೇಶ, ಪೆಲೆಟ್ ಘಟಕಗಳಿಗೆ ಭೇಟಿ ನೀಡುವರು.