ಹೊಸಪೇಟೆ (ವಿಜಯನಗರ): ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆ ಈಡೇರಿಸದ ಕಾರಣ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಬುಧವಾರ ಜಿಲ್ಲಾಡಳಿತದಿಂದ ಬುಧವಾರ ಇಲ್ಲಿ ಕರೆದಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕರಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ನಾಣಿಕೆರೆ ತಿಮ್ಮಯ್ಯ, ಮರಡಿ ಜಂಬಯ್ಯ ನಾಯಕ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಿಸುವ ವಿಷಯದಲ್ಲಿ ಸರ್ಕಾರ ಗಂಭೀರವಾಗಿಲ್ಲ.
ವಿನಾಕಾರಣ ಕಾಲಹರಣ ಮಾಡುತ್ತಿದೆ. ಹರಿಹರದ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಬೆಂಗಳೂರಿನಲ್ಲಿ 131 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದರೂ ಬೇಡಿಕೆ ಈಡೇರಿಸಿಲ್ಲ. ಹಾಗಾಗಿ ಜಯಂತಿ ಸಭೆ ಬಹಿಷ್ಕರಿಸಲು ನಿರ್ಧರಿಸಲಾಗಿದೆ. ಸರ್ಕಾರದ ಜಯಂತಿಯಲ್ಲಿ ಸಮಾಜದ ಜನಪ್ರತಿನಿಧಿಗಳು ಭಾಗವಹಿಸಿದರೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದರು. ಪರಿಶಿಷ್ಟ ವರ್ಗಗಳ ಇಲಾಖೆ ಸಚಿವ ಬಿ. ಶ್ರೀ ರಾಮುಲು ಅವರು ಸಂಪುಟದಲ್ಲಿ ವಿಣಯವನ್ನು ತಂದು ಮೀಸಲಾತಿ ಹೆಚ್ಚಿಸಲು ಶ್ರಮಿಸಬೇಕಿತ್ತು. ಆದರೆ, ನಿರಂತರವಾಗಿ ಸಮಾಜದ ದಾರಿ ತಪ್ಪಿಸುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ.ಅವರ ಮಾತು ನಂಬುವ ಸ್ಥಿತಿಯಲ್ಲಿ ಇಲ್ಲ. ಅ. 8ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ದಿಕ್ಕು ತಪ್ಪಿಸಲು ಸರ್ಕಾರದ ಅದೇ ದಿನ ಸರ್ವಪಕ್ಷಗಳ ಸಭೆ ಕರೆದಿದೆ ಎಂದು ಆರೋಪಿಸಿದರು.
ನಂತರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕುತ್ತ ಸಭೆಯಿಂದ ಹೊರಬಂದರು.ವಾಲ್ಮೀಕಿ ಪೀಠದ ಧರ್ಮದರ್ಶಿ ಜಂಬಯ್ಯ ನಾಯಕ, ಮುಖಂಡರಾದ ದುರುಗಪ್ಪ ಪೂಜಾರಿ, ಸೋಮಶೇಖರ್ ಬಣ್ಣದಮನೆ, ಭರಮಪ್ಪ, ಶ್ರೀಕಂಠ, ಶಿವಕುಮಾರ, ತಾಯಪ್ಪ ನಾಯಕ ಇತರರಿದ್ದರು.