ವಿಜಯಪುರ: ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಹೊರಟಿರುವ ಸಾವಿರಾರು ಕೂಲಿಕಾರ್ಮಿಕರು ಇಲ್ಲಿನ ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗವಾದ ಧೂಳಖೇಡ ಚೆಕ್ ಪೋಸ್ಟ್ನಲ್ಲಿ ಬೆಳಿಗ್ಗೆಯಿಂದಲೇ ಜಮಾಯಿಸಿದ್ದು, ಅವರ ತಪಾಸಣೆ ಮಾಡಿ ಕಳುಹಿಸಲಾಗುತ್ತಿದೆ.
ಕೆಲವರು ವಾಹನಗಳ ಮೂಲಕ, ಮತ್ತೆ ಕೆಲವರು ನಡೆದುಕೊಂಡೇ ತಮ್ಮ ರಾಜ್ಯಗಳತ್ತ ಸುಡು ಬಿಸಿಲನ್ನು ಲೆಕ್ಕಿಸದೆ ತಲೆ ಮೇಲೆ ಸರಕು, ಸರಂಜಾಮು ಹೊತ್ತು, ಚಿಕ್ಕಪುಟ್ಟ ಮಕ್ಕಳೊಂದಿಗೆ ಹೊರಟಿದ್ದಾರೆ.
ಸ್ಥಳಕ್ಕೆ ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಮಪ್ ಅಗರವಾಲ್, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಡೆದುಕೊಂಡು ಹೊರಟವರಿಗೆ ವಾಹನ ವ್ಯವಸ್ಥೆ ಕಲ್ಪಿಸಿದರು.