ಆಲಮಟ್ಟಿ: ಇಲ್ಲಿಯ ಆಲಮಟ್ಟಿ ಜಲಾಶಯದ ಬಳಿ ಅಂಗಡಿ ಇಟ್ಟುಕೊಂಡು ಚಹಾ, ಇನ್ನಿತರ ಸಣ್ಣಪುಟ್ಟ ವಸ್ತುಗಳ ಮಾರಾಟ ಮಾಡುವ ಚಹಾದಂಗಡಿ ಮಾಲೀಕನ ಮಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 94 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.
ಆಲಮಟ್ಟಿಯ ಕೃಷ್ಣಕುಮಾರ ಮುತ್ತಪ್ಪ ರಾಠೋಡ ಕನ್ನಡ 125, ಇಂಗ್ಲಿಷ್ 94, ಹಿಂದಿ 96, ಗಣಿತ 90, ಸಮಾಜ 93, ವಿಜ್ಞಾನದಲ್ಲಿ 89 ಅಂಕ ಪಡೆದು, ಶೇ 94 ಅಂಕ ಪಡೆದಿದ್ದಾರೆ.
ಕೃಷ್ಣಕುಮಾರ ಮುತ್ತಪ್ಪ ರಾಠೋಡ ಅವರ ತಂದೆ ಮುತ್ತಪ್ಪ ಆಲಮಟ್ಟಿ ಜಲಾಶಯದ ಬಳಿ ಚಹಾ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುತ್ತಾರೆ. ‘ನಾನಂತೂ ನನ್ನ ಮಗನ ವಿದ್ಯಾಭ್ಯಾಸದ ಕಡೆ ಲಕ್ಷ್ಯ ವಹಿಸುವುದಿಲ್ಲ. ಯಾವುದೇ ಟ್ಯೂಷನ್ಗೂ ಆತ ಹೋಗಲ್ಲ. ಶಾಲೆಯಲ್ಲಿ ಶಿಕ್ಷಕರು ಹೇಳಿದನ್ನೇ ಕೇಳಿ, ಈ ಸಾಧನೆ ಮಾಡಿದ್ದಾನೆ. ನಾನು ಬೆಳಿಗ್ಗೆ ಕೆಲಸಕ್ಕೆ ಬಂದರೆ ಮರಳಿ ಮನೆಗೆ ರಾತ್ರಿಯೇ ಹೋಗುವುದು. ಇಂತಹ ಸ್ಥಿತಿಯಲ್ಲಿಯೂ ಆತ ಸಾಧನೆ ಮಾಡಿದ್ದು ಹೆಮ್ಮೆ ತಂದಿದೆ ಎಂದು ಮಗನ ಸಾಧನೆಗೆ ತಂದೆ ಮುತ್ತಪ್ಪ ರಾಠೋಡ ಪ್ರತಿಕ್ರಿಯಿಸಿದ್ದಾರೆ.
ಕೃಷ್ಣಕುಮಾರ ಗ್ರಾಮೀಣ ಭಾಗದಲ್ಲಿನ ಎಂ.ಎಚ್.ಎಂ ಪ್ರೌಢಶಾಲೆ ವಿದ್ಯಾರ್ಥಿ. ಈತನ ಸಾಧನೆಗೆ ಶಿಕ್ಷಕ ಬಳಗ ಕೂಡಾ ಹೆಮ್ಮೆ ವ್ಯಕ್ತಪಡಿಸಿದೆ.
ನಿತ್ಯ ಐದು ಗಂಟೆ ಓದುತ್ತಿದ್ದೆ, ಮೊಬೈಲ್ನಿಂದ ದೂರವಿದ್ದೆ, ಲಾಕ್ಡೌನ್ ಕಾರಣ ಪರೀಕ್ಷೆ ಮುಂದೂಡಲಾಗಿತ್ತು. ಮುಂಚೆಯೇ ನಿಗದಿಯಾಗಿದ್ದ ವೇಳಾಪಟ್ಟಿಯಂತೆ ಪರೀಕ್ಷೆ ನಡೆದಿದ್ದರೆ ಇನ್ನಷ್ಟು ಅಂಕ ಪಡೆಯುತ್ತಿದ್ದೆ ಎಂದು ಕೃಷ್ಣಕುಮಾರ ಹೇಳಿದ್ದಾರೆ.