ರೈತರ ಧರಣಿಗೆ ಎಎಪಿ ಬೆಂಬಲ

ವಿಜಯಪುರ: ರೈತರು ಬೆಳೆದ ಕಬ್ಬಿಗೆ ಸರ್ಕಾರ ನ್ಯಾಯ ಸಮ್ಮತ ಹಾಗೂ ಲಾಭದಾಯಕ ಬೆಲೆ ನೀಡುವಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಕಟ್ಟು ನಿಟ್ಟಿನ ಆದೇಶ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಡಾ. ಬಿ.ಎಂ.ಬಿರಾದಾರ ಒತ್ತಾಯಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿ ಸಕ್ಕರೆ ಕಾರ್ಖಾನೆ ಮಾಲೀಕರ ಬೆಂಬಲಕ್ಕೆ ನಿಂತು ಕಬ್ಬು ಬೆಳೆಗಾರರಿಗೆ ಮೋಸ ಮಾಡುತ್ತಿದೆ. ಈ ದೇಶಕ್ಕೆ ಸಕ್ಕರೆ ಕಾರ್ಖಾನೆಯವರು ಮುಖ್ಯವಲ್ಲ, ದೇಶಕ್ಕೆ ಅನ್ನಕೊಟ್ಟು ಬದುಕಿಸುವ ರೈತನೇ ಮುಖ್ಯ ಎಂದರು.
ಉದ್ದಿಮೆದಾರರ ಪರವಾಗಿ ಸರ್ಕಾರಗಳು ಕೆಲಸ ಮಾಡುತ್ತಾ ರೈತರಿಗೆ ಅನ್ಯಾಯ ಮಾಡುತ್ತಿವೆ. ರೈತರು ಕೇಳುವ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಆಮ್ ಆದ್ಮಿ ಪಕ್ಷ ಕೂಡ ರೈತರ ಬೆನ್ನಿಗೆ ನಿಂತು ಬೀದಿಗಿಳಿದು ಉಗ್ರ
ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಎಎಪಿ ಮುಖಂಡರಾದ ಮಲ್ಲಿಕಾರ್ಜುನ ಕೆಂಗನಾಳ, ಅನ್ನಪೂರ್ಣ ಬೆಳ್ಳೆಣ್ಣವರ, ಬೋಗೇಶ ಸೋಲಾಪುರ, ನಾರಾಯಣ ಸಂಸ್ಥಾನಿಕ ಮಾತನಾಡಿದರು.
ಸದಾಶಿವ ಬರಟಗಿ, ಬಾಲಪ್ಪಗೌಡ ಲಿಂಗದಳ್ಳಿ, ಯಲ್ಲನಗೌಡ ಬಿರಾದಾರ, ಗೌಡಪ್ಪಗೌಡ ಬನ್ನೆಟ್ಟಿ, ಶರಣಗೌಡ ಬಿರಾದಾರ, ಸಂಗನಗೌಡ ಕೋಳೂರ, ಈರನಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಯಲ್ಲಾಲಿಂಗ ನಾಗಾರ, ಚನ್ನನಗೌಡ ಬಿರಾದಾರ, ಸೋಮನಗೌಡ ಕೂಳೂರ, ನಂದುಗೌಡ ಬಿರಾದಾರ, ಚನಬಸಪ್ಪ ಸಿಂಧೂರ, ಯಲ್ಲಣ್ಣ ಬಿರಾದಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.