ವಿಜಯಪುರ: ನಗರದ ಬಸವೇಶ್ವರ ವೃತ್ತದ ಜೆಡಿಎಸ್ ಕಚೇರಿ ಬಳಿ ಭಾನುವಾರ ತಡರಾತ್ರಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿ(ಟ್ಯಾಂಕರ್) ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಘಟನೆಯಲ್ಲಿ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಲಾರಿಯನ್ನು ತೆರವುಗಳಿಸಲು ಸೋಮವಾರ ಕ್ರೇನ್, ಜೆಸಿಬಿ ಯಂತ್ರಗಳ ಮೂಲಕ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದರಿಂದ ದಿನವಿಡೀ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಬಸವೇಶ್ವರ ವೃತ್ತದಿಂದ ಗಾಂಧಿ ಚೌಕಿ ವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿ, ಕೆಲ ಹೊತ್ತು ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಲಾರಿಯು ರಾತ್ರಿ ವೇಳೆ ಉರುಳಿ ಬಿದ್ದ ಪರಿಣಾಮ ಯಾವುದೇ ಹಾನಿಯಾಗಿಲ್ಲ. ಒಂದು ವೇಳೆ ಹಗಲಿನಲ್ಲಿ ಘಟನೆ ಸಂಭವಿಸಿದ್ದರೆ ಜೀವಹಾನಿಯಾಗುವ ಸಾಧ್ಯತೆ ಇತ್ತು. ಲಾರಿ ಇನ್ನೂ ಸ್ಥಳದಲ್ಲೇ ಇದೆ.