ವಿಜಯಪುರ:‘ಕೊಲಂಬೊದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ರಾಜ್ಯದ ನಾಗರಿಕರು ಮೃತಪಟ್ಟಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದರು.
‘ಇದು ಸೂಕ್ಷ್ಮ ವಿಚಾರ. ಹನುಮಂತರಾಯಪ್ಪ, ಎಂ.ರಂಗಪ್ಪ, ಲಕ್ಷ್ಮೀನಾರಾಯಣ, ಚಂದ್ರಶೇಖರ, ರಮೇಶ ಇನ್ನಿತರರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗುತ್ತಿಲ್ಲ. ನಿರಂತರವಾಗಿ ವಿದೇಶಾಂಗ ಸಚಿವಾಲಯದ ಸಂಪರ್ಕದಲ್ಲಿದ್ದೇವೆ’ ಎಂದು ಸೋಮವಾರ ಪತ್ರಕರ್ತರಿಗೆ ತಿಳಿಸಿದರು.
‘ಎಲ್ಲ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ. ಬೆಂಗಳೂರಿನ ದಾಸರಹಳ್ಳಿಯ ಏಳು ಜನರಿರುವ ಬಗ್ಗೆಯೂ ಮಾಹಿತಿಯಿದೆ. ಆದರೆ ಈ ವಿಷಯವನ್ನು ವಿದೇಶಾಂಗ ಇಲಾಖೆ ದೃಢಪಡಿಸಿಲ್ಲ. ಅಧಿಕೃತ ಮಾಹಿತಿ ದೊರೆಯುತ್ತಿದ್ದಂತೆ ತಿಳಿಸುತ್ತೇವೆ’ ಎಂದು ಹೇಳಿದರು.
‘ಬಾಂಬ್ ಸ್ಫೋಟ ಪ್ರಕರಣ ಖಂಡನೀಯ. ನಾಗರಿಕರನ್ನು ಕೇಂದ್ರವಾಗಿರಿಸಿಕೊಂಡು, ದಾಳಿ ನಡೆಸಿ ಅಮಾಯಕರ ಪ್ರಾಣ ತೆಗೆದಿರುವುದು ಅತ್ಯಂತ ಹೇಯ ಕೃತ್ಯ’ ಎಂದರು.