ವಿಜಯಪುರ: ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಶಂಕಿತರ ಗಂಟಲುದ್ರವ ಸಂಗ್ರಹ ವೇಳೆ ವೈದ್ಯ ಸಿಬ್ಬಂದಿ ರಕ್ಷಣೆಗೆ ಅನುಕೂಲವಾಗುವ ಅತ್ಯಾಧುನಿಕ ಕ್ಯಾಬಿನ್ ಅನ್ನು ಎಂ.ಬಿ.ಪಾಟೀಲ ಫೌಂಡೇಷನ್ ವತಿಯಿಂದ ಜಿಲ್ಲಾಡಳಿತಕ್ಕೆ ದೇಣಿಗೆ ನೀಡಲಾಯಿತು.
ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಕ್ಯಾಬಿನ್ ಅನ್ನು ಹಸ್ತಾಂತರಿಸಿ ಮಾತನಾಡಿದ ಶಾಸಕ ಎಂ.ಬಿ.ಪಾಟೀಲ, ಡಿಆರ್ಡಿಒ ವಿನ್ಯಾಸಗೊಳಿಸಿರುವ ಹಾಗೂ ಬೆಳಗಾವಿಯ ವೇಗಾ ಕಂಪನಿ ₹1.35 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಬಿನ್ ಸಿದ್ಧಪಡಿದೆ ಎಂದು ಹೇಳಿದರು.
ಕೊರೊನಾ ಸೋಂಕಿತರ ಪತ್ತೆ ಹಚ್ಚಲು ವ್ಯಕ್ತಿಗಳಿಂದ ಗಂಟಲುದ್ರವವನ್ನು ತೆಗೆಯುವ ಸಂದರ್ಭದಲ್ಲಿ ಈ ಕ್ಯಾಬಿನ್ ವೈದ್ಯ ಸಿಬ್ಬಂದಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.
ಬಿಎಲ್ಡಿಇ ಆಸ್ಪತ್ರೆಯಲ್ಲಿ ಇನ್ನೊಂದು ಕ್ಯಾಬಿನ್ ಇಡಲಾಗಿದೆ. ಕೋವಿಡ್–19 ದೃಢಪಟ್ಟಿರುವ ನಗರದ ಕಂಟೇನ್ಮೆಂಟ್ ಪ್ರದೇಶದಲ್ಲಿ ಇನ್ನೊಂದು ಕ್ಯಾಬಿನ್ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಶೀಘ್ರದಲ್ಲೇ ಇನ್ನೊಂದು ಕ್ಯಾಬಿನ್ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಈ ಕ್ಯಾಬಿನ್ ಬಳಕೆಯಿಂದ ವೈದ್ಯ ಸಿಬ್ಬಂದಿ ಸುರಕ್ಷಗೆ ಆದ್ಯತೆ ಸಿಗುವುದರಿಂದ ಅವರ ಮನೋಸ್ಥೈರ್ಯ ವೃದ್ಧಿಯಾಗುತ್ತದೆ. ಫೌಂಡೇಷನ್ಗೆ ಜಿಲ್ಲಾಡಳಿತದಿಂದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಫೌಂಡೇಷನ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ನಿರ್ದೇಶಕ ಮಹಾಂತೇಶ ಬಿರಾದಾರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರವಿಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಇದ್ದರು.