ವಿಜಯಪುರ: ಕೊರೊನಾ ಸಂಕಷ್ಟ ಸಮಯದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಕ್ಷೇತ್ರದಾದ್ಯಂತ ಸಂಚರಿಸಿ ಆಹಾರ ಹಾಗೂ ಮೆಡಿಕಲ್ ಕಿಟ್ ವಿತರಿಸಲಾಗುತ್ತಿದೆ ಎಂದು ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.
ನಾಗಠಣ ಮತಕ್ಷೇತ್ರದ ನಗರ ವಲಯದ ಯೋಗಾಪೂರ ಕಾಲೊನಿಯಲ್ಲಿ ಕಲಾವಿದರು ಹಾಗೂ ಕೊರೊನಾ ವಾರಿಯರ್ಸ್ಗಳಿಗೆ ಆಹಾರಧಾನ್ಯದ ಕಿಟ್ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಮಾತನಾಡಿದರು.
ಕೊರೊನಾ ಎರಡನೇ ಅಲೆ ಎಲ್ಲರನ್ನು ಬಹಳಷ್ಟು ತೊಂದರೆಗೊಳಪಡಿಸಿದೆ. ಆದರೂ ಯಾರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ನಾನು ಸದಾ ನಿಮ್ಮೊಂದಿಗಿದ್ದೇನೆ ಎಂದರು.
ಕಲಾವಿದರು ಇಡೀ ಜೀವಮಾನದಲ್ಲಿ ಮತ್ತೊಬ್ಬರನ್ನು ನಗಿಸುತ್ತ ಪರರ ಸುಖದಲ್ಲಿ ತಮ್ಮ ನಗು ಕಂಡುಕೊಂಡವರು. ಇಂತಹ ಸಂದರ್ಭದಲ್ಲಿ ತೊಂದರೆಯಾಗಿರುವುದನ್ನು ಮನಗಂಡು ಪ್ರತಿಯೊಬ್ಬರಿಗೂ ಆಹಾರ ಧಾನ್ಯ ಹಾಗೂ ಮೆಡಿಕಲ್ ಕಿಟ್ ನೀಡಲಾಗುತ್ತಿದೆ. ಪ್ರತಿಯೊಬ್ಬರು ಕೊರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.
ಸಾರ್ವಜನಿಕರು ಯಾವುದೇ ಕಾರಣಕ್ಕೂ ಅನಗತ್ಯವಾಗಿ ಹೊರಗಡೆ ಬರಬಾರದು. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಪರಸ್ಪರ ಅಂತರ ಕಾಯ್ದುಕೊಂಡು ಇರಬೇಕು. ಆಗ ಮಾತ್ರ ಕೊರೊನಾ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದರು.
ನಗರದ ವಿವಿಧ ವಾರ್ಡ್ಗಳ ವ್ಯಾಪ್ತಿಯಲ್ಲಿ ಆಹಾರ ಧಾನ್ಯದ ಕಿಟ್, ಸ್ಯಾನಿಟೈಸರ್, ಮಾಸ್ಕ್ ವಿತರಿಸಲಾಯಿತು.
ಕಲಾವಿದರ ಸಂಘದ ಅಧ್ಯಕ್ಷ ಎಲ್.ಬಿ.ಶೇಖ್, ಕಲಾವಿದರಾದ ಸಿದ್ದು ನಾಲತವಾಡ, ಗುಲಾಬ್ ಚವ್ಹಾಣ, ಶಿವು, ಪ್ರಭು, ಮನೋಜ ಜಿಗಜಿಣಗಿ ಸೇರಿದಂತೆ ಯೋಗಾಪೂರ ಕಾಲೊನಿಯ ಹಿರಿಯರು, ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.