ದೇವರಹಿಪ್ಪರಗಿ: ಕೊರೊನಾ ಕುರಿತು ಅನಗತ್ಯ ಭಯ ಬೇಡ. ಧೈರ್ಯ, ಆತ್ಮವಿಶ್ವಾಸಗಳೊಂದಿಗೆ ವೈದ್ಯರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಸೋಂಕಿನಿಂದ ಖಂಡಿತವಾಗಿಯೂ ಗುಣಮುಖರಾಗುತ್ತೇವೆ ಎನ್ನುತ್ತಾರೆ ಕೋವಿಡ್ನಿಂದ ಗುಣಮುಖರಾಗಿರುವ ಕೋರವಾರ ಗ್ರಾಮದ ಬಟ್ಟೆ ಅಂಗಡಿ ಮಾಲೀಕ ಹುಮಾಯೂನ್ ಮೋತಿಭಾಯ್.
ಮನೆಯಲ್ಲಿ ಅಣ್ಣ ಮತ್ತು ನನ್ನ ಹೆಂಡತಿಗೆ ಕೋವಿಡ್ ಸೋಂಕು ತಗುಲಿತ್ತು. ಅಣ್ಣನ ಪರಿಸ್ಥಿತಿ ಗಂಭೀರವಾಗುತ್ತಿದೆ ಎನ್ನುವ ಸಂದಿಗ್ಧ ಸಮಯದಲ್ಲಿ ಜುಲೈ 23 ರಂದು ನನ್ನ ಗಂಟಲುದ್ರವ ಮಾದರಿಯ ಫಲಿತಾಂಶ ಬಂದಿತ್ತು. ಅಂದು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕರೆ ಮಾಡಿದ ಸಿಬ್ಬಂದಿ ನಿಮ್ಮಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ಸಂಜೆ ನಿಮ್ಮನ್ನು ಕರೆದೊಯ್ಯಲು ಆಂಬುಲೆನ್ಸ್ ಬರುತ್ತದೆ ತಯಾರಾಗಿರಿ ಎಂದು ಹೇಳಿದರು. ಮನದಲ್ಲಿ ಸ್ವಲ್ಪ ಭಯ, ದುಗುಡ ಬಂತಾದರೂ ಧೈರ್ಯದಿಂದಲೇ ಏನಾದರೂ ಆಗಲಿ ನೋಡೋಣ ಎಂದು ದೇವರ ಮೇಲೆ ಭಾರ ಹಾಕಿ ದೇವರಹಿಪ್ಪರಗಿ ಕೋವಿಡ್ ಕೇರ್ ಸೆಂಟರ್ನಲ್ಲಿ ದಾಖಲಾದೆ ಎಂದರು.
ಆರೈಕೆ ಕೇಂದ್ರದಲ್ಲಿ ಬೆಳಿಗ್ಗೆ ಶುಂಠಿ ಚಹಾ, ಉಪಾಹಾರ, ಊಟದ ವ್ಯವಸ್ಥೆ ಇತ್ತು. ಯಾವುದೇ ತೊಂದರೆಯಾಗಲಿಲ್ಲ. ಆರು ದಿನಗಳ ಬಳಿಕ ನನ್ನಲ್ಲಿ ಅಂಥ ಗಂಭೀರವಾದ ಯಾವ ಲಕ್ಷಣಗಳು ಕಂಡು ಬರದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಯಿತು. ಈಗ ಎಲ್ಲರಂತೆ ಇದ್ದೇನೆ ಎಂದು ಅವರು ಹೇಳಿದರು.
ಕೊರೊನಾ ಸೋಂಕು ತಗುಲದಂತೆ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳವುದು, ಸ್ಯಾನಿಟೈಜರ್ ಬಳಕೆಯ ಜೊತೆಗೆ ಹೊರಗಡೆಯಿಂದ ಬಂದ ನಂತರ ಕೈ, ಕಾಲು, ಮುಖ ತೊಳೆಯುವುದು. ಬಿಸಿನೀರು ಕುಡಿಯುವುದು ಅಗತ್ಯವಾಗಿದೆ ಎನ್ನುತ್ತಾರೆ ಅವರು.