ಕುಡಿತದ ಚಟ ಹೊಂದಿದ್ದ ಸಿದ್ದಪ್ಪ ಕಾಳಗಿ ಸದಾ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಯಲ್ಲಮ್ಮ ಎರಡು ವರ್ಷಗಳಿಂದ ಪತಿಯಿಂದ ದೂರವಿದ್ದರು. ಸಹೋದರಿ ರೇಣುಕಾ ಅವರೊಂದಿಗೆ ಮುದ್ದೇಬಿಹಾಳ ಆಶ್ರಯ ಕಾಲೊನಿಯಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಶನಿವಾರ ಪತ್ನಿಯೊಂದಿಗೆ ಜಗಳವಾಡಿದ ಸಿದ್ದಪ್ಪ ಕುಡುಗೋಲಿನಿಂದ ಪತ್ನಿಯ ಕತ್ತಿನ ಬಳಿ ಹೊಡೆದ. ಅಸ್ವಸ್ಥಗೊಂಡ ಯಲ್ಲಮ್ಮ ಅವರನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಿ, ಹೆಚ್ಚಿನ ಚಿಕಿತ್ಸೆಗೆಂದು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪಿಎಸ್ಐ ಸಂಜಯ ತಿಪರೆಡ್ಡಿ ಮಾಹಿತಿ ನೀಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.