ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀ ಪೂಜೆ ಸಂಭ್ರಮ; ಪಟಾಕಿ ಸದ್ದಿನ ಅಬ್ಬರ

ಮನೆ, ಮನೆಗಳಲ್ಲಿ ಬೆಳಗಿದ ಹಣತೆ; ಅಂಗಡಿ, ಮಳಿಗೆಗಳಲ್ಲಿ ವಿಶೇಷ ಪೂಜೆ
Last Updated 14 ನವೆಂಬರ್ 2020, 14:45 IST
ಅಕ್ಷರ ಗಾತ್ರ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ದೀಪಾವಳಿ ಪ್ರಯುಕ್ತ ಮನೆ, ಮನೆಗಳಲ್ಲಿ, ಅಂಗಡಿ, ಮಳಿಗೆಗಳಲ್ಲಿ ಶನಿವಾರ ಲಕ್ಷ್ಮೀಯನ್ನು ಭಕ್ತಿ, ಭಾವದಿಂದ ಪೂಜಿಸಲಾಯಿತು.

ಅಂಗಡಿ, ಮಳಿಗೆಗಳನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು, ತಳಿರು, ತೋರಣ, ಬಾಳೆಗಿಡ, ಹೂವು, ಜಗಮಗಿಸುವ ವಿದ್ಯುತ್‌ ದೀಪಗಳಿಂದ ಆಲಂಕರಿಸಲಾಗಿತ್ತು. ಮನೆ, ಅಂಗಡಿ, ಮಳಿಗೆಗಳ ಎದುರು ಮಹಿಳೆಯರು ಬೃಹದಾಕಾರದ ರಂಗೋಲಿಯನ್ನು ಬಿಡಿಸಿದ್ದರು. ಲಕ್ಷ್ಮೀಯ ಫೋಟೊವನ್ನು ಅಂಗಡಿಗಳ ಒಳಗೆ ಇಟ್ಟು ಪೂಜಿಸಲಾಯಿತು. ಕುಟುಂಬಸ್ಥರು, ನೆಂಟರು, ಸ್ನೇಹಿತರನ್ನು ಪೂಜೆಗೆ ಆಹ್ವಾನಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಹಬ್ಬದ ಪ್ರಯುಕ್ತ ಮನೆಗಳಲ್ಲಿ ವಿಶೇಷ ಸಿಹಿ ಭಕ್ಷ್ಯ, ಭೋಜನವನ್ನು ತಯಾರಿಸಿ, ಮನೆಯವರು, ನೆರೆಹೊರೆಯವರೊಂದಿಗೆ ಸವಿದರು.

ಸಂಜೆಯಾಗುತ್ತಲೇಮನೆಯಂಗಳಲ್ಲಿ ಹಣತೆಗಳನ್ನು ಬೆಳಗಿಸಿ, ಆಕಾಶ ಬುಟ್ಟಿಯನ್ನು ಹೊತ್ತಿಸಿ, ಲಕ್ಷ್ಮಿಗೆ ನೈವೇದ್ಯ ಅರ್ಪಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು.

ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಹೊಸ ಪುಸ್ತಕದಲ್ಲಿ ಶುಭ–ಲಾಭವನ್ನು ಬರೆಯುವ ಮೂಲಕ ಲೆಕ್ಕವನ್ನು ಆರಂಭಿಸಿದರು. ಸಂಜೆಯಿಂದ ಆರಂಭವಾದ ಅಂಗಡಿ, ಮಳಿಗೆಗಳ ಪೂಜೆ ತಡರಾತ್ರಿ ವರೆಗೂ ನಡೆಯಿತು.

ಪೂಜೆಯ ವೇಳೆಮಕ್ಕಳು, ಯುವಕರು ಬಗೆಬಗೆಯ ಪಟಾಕಿಗಳನ್ನು ಸಿಡಿಸಿ ಆನಂದಿಸಿದರು. ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವಂತೆ ಹೈಕೋರ್ಟ್‌ ಆದೇಶವಿದ್ದರೂ ಎಲ್ಲಿಯೂ ಅದರ ಪರಿವೇ ಇಲ್ಲದೇ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಶಬ್ಧ ಮತ್ತು ಮಾಲಿನ್ಯ ಉಂಟು ಮಾಡುವ ಪಟಾಕಿಗಳ ಸದ್ದು ಜೋರಾಗಿತ್ತು.

ವ್ಯಾಪಾರ ಜೋರು: ಅಂಗಡಿ ಮತ್ತು ವಾಹನಗಳ ಪೂಜೆಗೆ ವಿಶೇಷವಾಗಿ ಬಳಸುವ ಸೇವಂತಿಗೆ,ಚೆಂಡು ಹೂವು, ಸೇಬು, ಚಿಕ್ಕು, ಸೀತಾಫಲ, ಬಾಳೆ ಹಣ್ಣು, ವೈವಿಧ್ಯಮ ಹಣತೆ, ಕಬ್ಬು ಮತ್ತು ಬಾಳೆಗಿಡ, ಚೆಂಡುಹೂವಿನ ಗಿಡ, ಕುಂಬಳಕಾಯಿ, ಚಿನ್ನಿಕಾಯಿ ವ್ಯಾಪಾರ ಶನಿವಾರ ನಗರ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿಜೋರಾಗಿತ್ತು. ವ್ಯಾಪಾರಸ್ಥರು ದುಪ್ಪಟ್ಟು ದರಕ್ಕೆ ಮಾರಾಟ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT