ವಿಜಯಪುರ: ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದ ಅನುದಾನರಹಿತ ಶಾಲಾ ಶಿಕ್ಷಕ, ಶಿಕ್ಷಕಿಯರಿಗೆವಿಜಯಪುರದ ಶ್ರೀ ತುಳಸಿಗಿರೀಶ ಮಧುಮೇಹ ಆಸ್ಪತ್ರೆಯಮಧುಮೇಹ ತಜ್ಞ, ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಬಾಬುರಾಜೇಂದ್ರ ಬಿ.ನಾಯಿಕ ಅವರು ‘ಗುರು ಗೌರವ’ ಆಹಾರ ಕಿಟ್ ವಿತರಿಸಿದರು.
ಲಾಕ್ಡೌನ್ ಪರಿಣಾಮ ಶಾಲೆಗಳು ಬಂದ್ ಆಗಿರುವುದರಿಂದ ಒಂದು ವರ್ಷದಿಂದ ವೇತನವಿಲ್ಲದೇ ಸಂಕಷ್ಟಕ್ಕೆ ಒಳಗಾಗಿರುವ 300ಕ್ಕೂ ಅಧಿಕ ಅನುದಾನರಹಿತ ಶಾಲಾ ಶಿಕ್ಷಕ, ಶಿಕ್ಷಕಿಯರಿಗೆ ‘ಗುರು ಗೌರವ’ ಹೆಸರಿನಲ್ಲಿ ಆಹಾರ್ ಕಿಟ್ ವಿತರಿಸುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ ಎಂದು ಬಾಬುರಾಜೇಂದ್ರ ನಾಯಿಕ ಹೇಳಿದರು.
5 ಕೆ.ಜಿ ಗೋಧಿ ಹಿಟ್ಟಿ, 5 ಕೆ.ಜಿ.ಅಕ್ಕಿ, 1 ಕೆ.ಜಿ ಬೇಳೆ, 1 ಕೆ.ಜೆ.ಅವಲಕ್ಕಿ, 1 ಕೆ.ಜಿ.ರವೆ ಮತ್ತು 1 ಲೀಟರ್ ಅಡುಗೆ ಎಣ್ಣೆ ಒಳಗೊಂಡಿರುವ ಕಿಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಪರಿಣಾಮ ಬಹಳಷ್ಟು ಜನ ಕೆಲಸ ಕಳೆದುಕೊಂಡು ತೊಂದರೆಗೆ ಒಳಗಾಗಿದ್ದಾರೆ. ಅದರಲ್ಲೂ ಅನುದಾನಿತ ಶಾಲಾ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕ ಸಂಕಷ್ಟ ಹೇಳತೀರದಾಗಿದ್ದು, ಕೈಲಾದ ಸಹಾಯ ಮಾಡಲಾಗುತ್ತಿದೆ ಎಂದರು.
ಲಾಕ್ಡೌನ್ ತೆರವಾಗಿರುವುದರಿಂದ ಕೋವಿಡ್ ನಿವಾರಣೆಯಾಗಿದೆ ಎಂಬ ಕಲ್ಪನೆ ಬೇಡ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ ಕಾಪಾಡಬೇಕು ಎಂದು ಹೇಳಿದರು.
ಕೋವಿಡ್ ಲಕ್ಷಣಗಳು ಕಂಡುಬಂದರೆ ಮರೆಯದೇ ವೈದ್ಯರ ಸಲಹೆ ಪಡೆಯಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಸ್ವಯಂ ಉಪಚಾರಕ್ಕಿಂತ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ವಿಜಯಪುರ, ಬಾಗಲಕೋಟೆ, ಮುಧೋಳ ಮತ್ತು ಜಮಖಂಡಿಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಅವುಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದೇನೆ. ಅಗತ್ಯ ಇರುವವರು ಇಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.
ಬಿಜೆಪಿ ಬೆಳಗಾವಿ ವಿಭಾಗ ಪ್ರಭಾರಿಚಂದ್ರಶೇಖರ ಕವಟಗಿ, ವಿಜಯಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕ ಜಾಧವ್, ಮೆಡ್ಮಂಥನ ಹೆಲ್ತ್ ಕೇರ್ ಕಂಪನಿಯ ನಿರ್ದೇಶಕ ಸುನೀಲ್ ನಾಯಕ್, ಲಯನ್ಸ್ ಕಲ್ಬ್ ಅಧ್ಯಕ್ಷ ಫಯಾಜ್ ಕಲಾದಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.