ವಿಜಯಪುರ:ಭೀಮಾ ತೀರದ ರೌಡಿ ಗಂಗಾಧರ ಚಡಚಣನ ನಿಗೂಢ ಕೊಲೆ ಹಾಗೂ ಧರ್ಮರಾಜ ಚಡಚಣನ ಎನ್ಕೌಂಟರ್ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ. ಸೂಕ್ತ ಮೇಲ್ವಿಚಾರಣೆ ನಡೆಸಿಲ್ಲ ಎಂಬ ಕರ್ತವ್ಯ ಲೋಪದ ಮೇರೆಗೆ ಇಂಡಿ ಡಿವೈಎಸ್ಪಿ ರವೀಂದ್ರ ಶಿರೂರ ಅವರನ್ನು ಗೃಹ ಇಲಾಖೆ ಸೇವೆಯಿಂದ ಅಮಾನತುಗೊಳಿಸಿದೆ ಎಂಬುದು ತಿಳಿದು ಬಂದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಿಐಡಿ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸುವುದಕ್ಕೂ ಮುನ್ನವೇ, 13ನೇ ಆರೋಪಿಯಾಗಿರುವ ಚಡಚಣ ಪೊಲೀಸ್ ಠಾಣೆಯ ಈ ಹಿಂದಿನ ಸಿಪಿಐ ಆಗಿದ್ದ ಎಂ.ಬಿ.ಅಸೋಡೆಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಇಂಡಿ ಡಿವೈಎಸ್ಪಿ ರವೀಂದ್ರ ಶಿರೂರ, ಸಿಪಿಐ ಎಂ.ಬಿ.ಅಸೋಡೆ ಇಬ್ಬರೂ ಸೇವೆಯಿಂದ ಅಮಾನತುಗೊಂಡಿದ್ದಾರೆ. ಗೃಹ ಇಲಾಖೆಯಿಂದಲೇ ಆದೇಶ ಹೊರಬಿದ್ದಿದೆ’ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ‘ಪ್ರಜಾವಾಣಿ’ಗೆ ತಿಳಿಸಿದರು.