ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಕಡಣಿಯ ‘ಬೆರಗು’ ಪ್ರಕಾಶನಕ್ಕೆ ಐದರ ಸಂಭ್ರಮ

32 ಪುಸ್ತಕಗಳ ಲೋಕಾರ್ಪಣೆಗೆ ಭೀಮಾತೀರ ಸಜ್ಜು
Last Updated 22 ಅಕ್ಟೋಬರ್ 2022, 10:00 IST
ಅಕ್ಷರ ಗಾತ್ರ

ವಿಜಯಪುರ: ಕಡಣಿಯ ‘ಬೆರಗು’ ಪ್ರಕಾಶನದಿಂದಾಗಿ ಭೀಮಾತೀರ ಈಗ ಸಾಂಸ್ಕೃತಿಕ ವಲಯವಾಗಿ ಮಾರ್ಪಟ್ಟಿದೆ. ತನಗಿರುವ ‘ಹಂತಕ’ ಹೆಸರನ್ನು ಅಳಸಿ, ನದಿ ತೀರಸಾಹಿತ್ಯ ಸಂಭ್ರಮದಲ್ಲಿ ತೊಡಗಿದೆ.

2017ರಲ್ಲಿ ಸ್ಥಾಪನೆಯಾದ ಈ ಬೆರಗು ಪ್ರಕಾಶನ ತನ್ನ 60 ವಸಂತಗಳ ದಾರಿಯಲ್ಲಿ 82 ಪುಸ್ತಕಗಳನ್ನು ಪ್ರಕಟಿಸಿ ಸಾಹಿತ್ಯ ವಲಯದಲ್ಲಿ ಬೆರಗು ಮೂಡಿಸಿದೆ. ಬರುವ ಶನಿವಾರ(ಅ.29) ಮತ್ತೊಮ್ಮೆ 32 ಪುಸ್ತಕಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಜಿಲ್ಲೆಯ ಸಾಹಿತ್ಯಿಕ ವಲಯದಲ್ಲಿ ಮತ್ತೊಮ್ಮೆ ದಾಖಲೆ ಬರೆಯಲು ಸಿದ್ದವಾಗಿದೆ.

ಪ್ರಕಾಶಕಿ ವಿಜಯಲಕ್ಷ್ಮಿ ಕತ್ತಿ ಅವರು ತಮ್ಮ ಪತಿ ರಮೇಶ ಕತ್ತಿ ಅವರೊಂದಿಗೆ ಹುಟ್ಟು ಹಾಕಿ ಮೊದಲ ವರ್ಷ ಒಂದು ಕೃತಿ ತಂದರು, ಪ್ರತಿ ವರ್ಷ ಕನಿಷ್ಠ ಹತ್ತು ಕೃತಿಗಳನ್ನು ಅದರಲ್ಲೂ ಜಿಲ್ಲೆಯ ಉದಯೋನ್ಮುಖ ಲೇಖಕರ ಕೃತಿಗಳನ್ನು ಪ್ರಕಟಿಸುವ ಸಾಹಸ ಮಾಡಿದರು. ಪ್ರಶಸ್ತಿ ಪಡೆಯುವ ಕೃತಿಗಳನ್ನು ಪ್ರಕಟಿಸುತ್ತಿರುವ ಬಹುತೇಕ ಪ್ರಕಾಶನ ಸಂಸ್ಥೆಗಳು ಯುವ ಸಾಹಿತಿಗಳಿಗೆ ಉತ್ತೇಜನ ನೀಡುವುದು ಕಡಿಮೆ, ಇವರಿಗೆ ವೇದಿಕೆ ನೀಡಬೇಕು ಎಂದು ಆಲೋಚಿಸಿ ಆ ಕಾರ್ಯವನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ.

ಕಳೆದ ವರ್ಷ ಡಾ. ಎಂ.ಎಂ.ಕಲಬುರ್ಗಿ ಅವರ ಹೆಸರಿನಲ್ಲಿ 28 ಕೃತಿಗಳನ್ನು ಕೊರೊನಾ ನಂತರದ ಅವಧಿಯಲ್ಲಿ ಬಿಡುಗಡೆ ಮಾಡಿದ್ದರು. ಈ ವರ್ಷ ‘ಪುಸ್ತಕದ ಜಗದ್ಗುರು’ ಎಂದೇ ಖ್ಯಾತರಾಗಿದ್ದ ಡಾ. ತೋಂಟದ ಸಿದ್ದಲಿಂಗ ಶ್ರೀಗಳ ನೆನಪಿನಲ್ಲಿ ಕಾರ್ಯಕ್ರಮ ಆಯೋಜಿಸಿ. ಕನ್ನಡ 28, ಇಂಗ್ಲಿಷ್‌ 3, ಮರಾಠಿ 1 ಸೇರಿದಂತೆ 32 ಪುಸ್ತಕಗಳ ಬಿಡುಗಡೆಗೆ ಸಿದ್ಧತೆ ನಡೆದಿದೆ.

ಕಾವ್ಯ, ಕತೆ, ಕಾದಂಬರಿ, ನಾಟಕ, ಜೀವನ ಚರಿತ್ರೆ, ವಿಮರ್ಶೆ, ಸಂಶೋಧನೆ ಸೇರಿದಂತೆ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ನಾಡಿನ ಎಲ್ಲಾ ಭಾಗದ ಸಾಹಿತಿಗಳ ಕೃತಿಗಳನ್ನು ಪ್ರಕಾಶನ ಪ್ರಕಟಿಸಿದೆ.

‘ನಾವು- ನಮ್ಮ ಸಾಧಕರ ಮಾಲೆ’ ಎಂಬ ವಿನೂತನ ಯೋಜನೆ ಹಾಕಿಕೊಂಡು ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರ ಕುರಿತು ಪುಸ್ತಕಗಳನ್ನು ಪ್ರಕಟಿಸಿದೆ. ಇದಲ್ಲದೇ ತಾಲ್ಲೂಕು ದರ್ಶನ ಮಾಲೆ ಎಂಬ ಯೋಜನೆಯು ಸಿದ್ಧವಾಗಿದೆ.

ರಾಜ್ಯ ಮಟ್ಟದ ಬೆರಗು ಪ್ರಶಸ್ತಿ:ಪ್ರತಿ ವರ್ಷ ಹಸ್ತಪ್ರತಿಗಳನ್ನು ಆವ್ಹಾನಿಸಿ ಒಬ್ಬ ಲೇಖಕರಿಗೆ ₹ 5 ಸಾವಿರ ನಗದು, ಫಲಕ ನೀಡಿ ಗೌರವಿಸುವದಲ್ಲದೇ ಆ ಕೃತಿಯನ್ನು ಸುಂದರವಾಗಿ ಪ್ರಕಟಿಸಿ ಪ್ರಶಸ್ತಿ ಪ್ರದಾನದ ಜೊತೆಗೆ ಬಿಡುಗಡೆ ಮಾಡಲಾಗುತ್ತದೆ. ಮುದ್ರಿತ ಪುಸ್ತಕಕ್ಕೂ ಇದೇ ವರ್ಷದಿಂದ ಪ್ರಶಸ್ತಿ ನೀಡಲಾಗುತ್ತಿದೆ.

2022 ರ ಸಾಲಿನಲ್ಲಿ ಬಸವರಾಜ ಡೋಣೂರ ‘ಉರಿವ ಕೆಂಡದ ಮೇಲೆ‘ ಹಾಗೂ ಶಂಕರ ಬೈಚಬಾಳ ಅವರ 'ಕೆಂಪು ಹುಡುಗಿ, ಕಪ್ಪು ಕಾಲ್ಮರಿ' ಹಸ್ತಪ್ರತಿಗೆ ಬಹುಮಾನ ನೀಡಲಾಗಿದೆ. ವಿದ್ವಾಂಸ ಪ್ರೊ. ಮಲ್ಲೇಪುರಂ ವೆಂಕಟೇಶ ಕೃತಿ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಮಾಡುವರು.

60 ವಸಂತ 82 ಪುಸ್ತಕ:ಪುಸ್ತಕ ಪ್ರಕಟಣೆ ಎಂಬುದು ಸಾಹಸದ ಕೆಲಸ ಎನ್ನುವ ಈ ದಿನಗಳಲ್ಲಿ ಸಹಕಾರ ತತ್ವದಡಿ ಐದು ವರ್ಷಗಳಲ್ಲಿ 82 ಪುಸ್ತಕಗಳನ್ನು ಪ್ರಕಾಶನ ಪ್ರಕಟಿಸಿದ್ದು ಬೆರಗು ಮೂಡಿಸುತ್ತದೆ. ಸರ್ಕಾರದ ಅಕಾಡೆಮಿಕ್ ವಲಯಗಳು, ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಸಹ ಕುಂಟುತ್ತಾ ಸಾಗಿರುವ ಇಂದಿನ ದಿನಗಳಲ್ಲಿ ಬೆರಗು ಪ್ರಕಾಶನದ ಕಾರ್ಯ ಮೆಚ್ಚುವಂತಹದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT