ವಿಜಯಪುರ: ಇಂಡಿ ತಾಲ್ಲೂಕು ಧೂಳಖೇಡ ಸಮೀಪದ ಮರಗೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿಯ ಸದಾಶಿವ ಮಲ್ಲಪ್ಪ ಕೋಳಿ ಅವರ ಪತ್ರಾಸ್(ಟಿನ್ ಶೀಟ್) ಶೆಡ್ಡಿನಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಅಪಾರ ಹಾನಿಯಾಗಿದೆ.
ಬೆಳಿಗ್ಗೆ 10.20ಕ್ಕೆ ಈ ಅವಘಡ ಸಂಭವಿಸಿದೆ. ಸದಾಶಿವ ಅವರಿಗೆ ಸೇರಿದ 15 ಚೀಲ ಶೇಂಗಾ, 5 ಚೀಲ ಜೋಳ, 2 ಚೀಲ ಗೋಧಿ, 30 ಗ್ರಾಂ ಚಿನ್ನಾಭರಣ ಹಾಗೂ ₹40 ಸಾವಿರ ನಗದು ಬೆಂಕಿಗೆ ಆಹುತಿಯಾಗಿವೆ.
ಸದಾಶಿವ ಅವರ ಶೆಡ್ ಸಮೀಪದ ಕಲ್ಲಪ್ಪ ರಾಮಾ ಕೋಳಿ ಅವರ ಗುಡಿಸಲಿಗೂ ಬೆಂಕಿ ತಗುಲಿದ್ದು, ₹15 ಸಾವಿರ ನಗದು, ಅರ್ಧ ತೊಲೆ ಬಂಗಾರ, ತಲಾ ಒಂದು ಚೀಲ ಗೋಧಿ, ಜೋಳ ಬೆಂಕಿಗೆ ಆಹುತಿಯಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.