ವಿಜಯಪುರ: ನಗರದ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಆರ್.ಕೆ.ಎಂ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ‘ವಿಶ್ವ ತಂಬಾಕು ರಹಿತ ದಿನಾಚರಣೆ’ ಅಂಗವಾಗಿ ಈಚೆಗೆ ಬಾಯಿ ಆರೋಗ್ಯ ತಪಾಸಣೆ ಹಾಗೂ ಬಾಯಿ ಆರೋಗ್ಯ ಅರಿವು ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ರೂಪಶ್ರೀ ಮಾತನಾಡಿ, ‘ಪ್ರತಿವರ್ಷ ಲಕ್ಷಾಂತರ ಜನರು ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ತಂಬಾಕು ಸೇವನೆಯಿಂದ ಯುವಜನ ತಮ್ಮ ಅಮೂಲ್ಯ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದರು.
ಆರ್.ಕೆ.ಎಂ ಆಯುರ್ವೇದ್ ಕಾಲೇಜಿನ ಪ್ರಾಚಾರ್ಯ ಡಾ.ನಂದಕುಮಾರ ರುದ್ರಗೌಡರ ಮಾತನಾಡಿ, ‘ಜೀವನದಲ್ಲಿ ಸಾಧನೆ ಮಾಡಲು ಸದೃಢ ಮನಸ್ಸು, ಸದೃಢ ದೇಹ ಹೊಂದುವುದು ಅವಶ್ಯ. ಯುವಕರು ದುಶ್ಚಟಗಳಿಗೆ ಒಳಗಾಗದೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ರಾಜೇಶ್ವರಿ ಬಿರಾದಾರ, ಅಧೀಕ್ಷಕ ದೀಪಕ ಅಥಣಿ, ಡಾ.ಇಮ್ತಿಯಾಜ್ ಕೊತ್ವಾಲ ಇದ್ದರು.