ವಿಜಯಪುರ: ಐದು ದಶಕಗಳ ಕಾಲ ರಂಗಭೂಮಿಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗೆ ಕಲಾವಿದೆ ಲಲಿತಾಬಾಯಿ ಚನ್ನದಾಸರ ಅವರಿಗೆ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕುಗಾಮವಾದ ಚವಡಿಹಾಳದಲ್ಲಿ ಜನಿಸಿದ ಲಲಿತಾಬಾಯಿ, 9ನೇ ವಯಸ್ಸಿಗೆ ಬಣ್ಣ ಹಚ್ಚಿ ಪಾರಿಜಾತದ ಮೂಲಕ ರುಕ್ಮಿಣಿ, ನಾರದ, ದೊರೆಸಾನಿ ಪಾತ್ರಗಳಲ್ಲಿ ಎರಡು ವರ್ಷ ಮಿಂಚಿದರು. ನಂತರ ನಾಟಕ ರಂಗಕ್ಕೆ ಪ್ರವೇಶಿಸಿದ ಅವರು ನಿರಂತರ ಐದು ದಶಕಗಳ ಕಾಲ ಹಲವಾರು ಸಾಮಾಜಿಕ, ಪೌರಾಣಿಕ ನಾಟಕಗಳ ಮೂಲಕ ನಾಡಿನ ಜನರನ್ನು ರಂಜಿಸಿದ್ದಾರೆ.
‘ಬಾಲ ನಟಿಯಾಗಿ ರಂಗ ಕಲಾ ಸೇವೆ ಆರಂಭಿಸಿದ್ದ ನಾನು, ಹಲವಾರು ನಾಟಕಗಳಲ್ಲಿ ಬಣ್ಣ ಹಚ್ಚಿದ್ದೇನೆ. ಜನರನ್ನು ರಂಜಿಸಿದ್ದೇನೆ. ನನ್ನ ಸೇವೆ ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಸಂತಸ ವಿಷಯ. 50 ವರ್ಷಗಳ ಸೇವೆಗೆ ಇದೀಗ ಫಲ ಸಿಕ್ಕಿದಂತಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಕರ್ನಾಟಕ ನಾಟಕ ಅಕಾಡೆಮಿ ಕೂಡ 2021ನೇ ಸಾಲಿನ ವಾರ್ಷಿಕ ರಂಗ ಪ್ರಶಸ್ತಿ ನೀಡಿ ಗೌರವಿಸಿದೆ’ ಎಂದು ಲಲಿತಾಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.