ಕುಡುಒಕ್ಕಲಿಗ ಗುರುಪೀಠಕ್ಕೆ ಭೂಮಿಪೂಜೆ

ವಿಜಯಪುರ: ಭಾರತ ದೇಶದ ಬೆನ್ನೆಲುಬು ಎಂದರೆ ರೈತರು ಆದ್ದರಿಂದ ಪ್ರತಿಯೊಬ್ಬ ನಾಗರಿಕನು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಹೃದಯದಿಂದ ಮತ್ತು ಹೆಮ್ಮೆಯಿಂದ ಹೇಳಬೇಕು ಎಂದು ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ವಿಜಯಪುರ ತಾಲ್ಲೂಕಿನ ಕವಲಗಿ ಗ್ರಾಮದ ಜಗದ್ಗುರು ಶಿವಯೋಗಿ ಶ್ರೀಸಿದ್ಧರಾಮೇಶ್ವರ ಕುಡು ಒಕ್ಕಲಿಗ ಮಹಾಸಂಸ್ಥಾನ ಗುರುಪೀಠದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕುಡು ಒಕ್ಕಲಿಗರು ಎಂದರೆ ಪ್ರಪಂಚದ ಎಲ್ಲ ಜನರಿಗೆ ಆಹಾರ ಧಾನ್ಯ, ಕಾಳುಕಡಿಯನ್ನು ಕೊಡುವಂತವರು. ಆಹಾರ ಧಾನ್ಯ ಬೆಳೆಯುವವರೆಲ್ಲರೂ ಸಹ ರೈತರೆ ಎಂದು ಹೇಳಿದರು.
ಜನಿಸಿದ ಪ್ರತಿಯೊಬ್ಬ ಮನುಷ್ಯನಿಗೆ ಭೂಮಿಯ ಮೇಲೆ ಸಾಮರಸ್ಯ ಮತ್ತು ಸಂತಸದಿಂದ ಬದುಕ ಬೇಕೆಂದರೆ ಕಾಯಕ, ಆಧ್ಯಾತ್ಮಿಕ ಚಿಂತನೆ ಮತ್ತು ಉನ್ನತಮಟ್ಟದ ಶಿಕ್ಷಣ ಅತ್ಯವಶ್ಯಕವಾಗಿದೆ. ಜೊತೆಗೆ ಸಾಮಾಜಿಕ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದರು.
ನಿಯೋಜಿತ ಪೀಠಾಧ್ಯಕ್ಷ ಡಾ.ಅಭಿನವ ಸಿದ್ದರಾಮೇಶ್ವರ ಮಹಾಸ್ವಾಮಿ, ಭೂಮಿಪೂಜೆ ನೆರವೇರಿಸಿದ ಈ ಸ್ಥಳ ಜ್ಞಾನ ಸತ್ರವಾಗಲಿದೆ ಎಂದರು.
ಮಾಜಿ ಶಾಸಕ ಎನ್.ಎಸ್.ಖೇಡ, ಕನ್ಹೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಶಿರೋಳ ರಾಮಾಮಠದ ಶಂಕರಾರೂಢ ಸ್ವಾಮೀಜಿ, ಬುರಾಣಪುರ ಆರೂಢಾ ಮಠದ ಯೋಗೇಶ್ವರಿ ತಾಯಿ, ಬೆಳಗಾವಿಯ ಗಣಿತ ತಜ್ಞ ಪ್ರೊ.ಎನ್.ವೆಂಕಟೇಶ, ಡಾ.ಸಿದ್ದಣ್ಣ ಉತ್ನಾಳ, ಮಂಜುನಾಥ ಜನಗೊಂಡ, ಭೀಮಾಶಂಕರ ಬಿರಾದಾರ ಉಪಸ್ಥಿತರಿದ್ದರು.
***
ದೇಶದಲ್ಲಿ ಸದಾ ಗೌರವಿಸಲ್ಪಡುವವರೆಂದರೆ ದೇಶ ಕಾಯುವ ವೀರ ಸೈನಿಕರು ಮತ್ತು ಬೆವರು ಸುರಿಸಿ ದುಡಿಯುವ ರೈತರು.
-ಸಿದ್ಧೇಶ್ವರ ಸ್ವಾಮೀಜಿ
ಜ್ಞಾನಯೋಗಾಶ್ರಮ, ವಿಜಯಪುರ
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.