ವಿಜಯಪುರ: ನವೆಂಬರ್ 15ರಿಂದ ಡಿಸೆಂಬರ್ 27ರ ವರೆಗೆ ‘ಪ್ರಜಾವಾಣಿ’ಯು ಓದುಗರಿಗಾಗಿ ಏರ್ಪಡಿಸಿರುವ ನ್ಯೂಸ್ ಕ್ವಿಜ್ ಸ್ಪರ್ಧೆಯ ಆಟೊ ಪ್ರಚಾರಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಪ್ರಸನ್ನಕುಮಾರ್ ಗುರುವಾರ ಚಾಲನೆ ನೀಡಿದರು.
‘ಪ್ರಜಾವಾಣಿ’ ಪತ್ರಿಕೆಯು ನಾಡಿದ ಅತ್ಯಂತ ವಿಶ್ವಾಸರ್ಹ ಪತ್ರಿಕೆಯಾಗಿದೆ. ಇದರಲ್ಲಿ ನಿತ್ಯ ಬರುವ ವೈವಿದ್ಯಮಯ ಸುದ್ದಿಗಳು, ಲೇಖನಗಳು ಓದುಗರ ಜ್ಞಾನವನ್ನು ಹೆಚ್ಚಿಸುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಡಿಡಿಪಿಐ ಅಭಿಪ್ರಾಯಪಟ್ಟರು.
ಪ್ರಜಾವಾಣಿ, ಸುಧಾ, ಮಯೂರ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ಕರ್ನಾಟಕದ ಪ್ರಜ್ಞಾವಂತ ಓದುಗರ ಪತ್ರಿಕೆ ಎಂದೇ ಹೆಸರಾಗಿವೆ. ಈ ಪತ್ರಿಕೆ ಓದಿನಿಂದ ಸಾಕಷ್ಟು ಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ನೆರವಾಗಿದೆ ಎಂದು ಹೇಳಿದರು.
ನ್ಯೂಸ್ ಕ್ವಿಜ್ ಸ್ಪರ್ಧೆಯಲ್ಲಿ ನಮ್ಮ ಜಿಲ್ಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಹುಮಾನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ವಿಶೇಷಾಂಕ ಬಿಡುಗಡೆ:ಇದೇ ಸಂದರ್ಭದಲ್ಲಿ ಡಿಡಿಪಿಐ ಪ್ರಸನ್ನಕುಮಾರ್ ಅವರು ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕವನ್ನು ಬಿಡುಗಡೆ ಮಾಡಿದರು.
ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿರುವ ರಾಮಾಯಣ ಕುರಿತು ಈ ಬಾರಿ ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕ ‘ಅಗಣಿತ ರಾಮ’ ಒಳಗೊಂಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಜಿ.ಎ.ದಾಸರ, ಎಸ್.ಎನ್.ಮಿರ್ಜಿ, ಎಂ.ಎನ್.ಕುಲಕರ್ಣಿ, ಬಿ.ಎನ್.ಬಾಗೇವಾಡಿ, ಎಸ್.ಎನ್. ಹಿರೇಮಠ, ಎಂ.ಎನ್.ಪೂಜಾರಿ, ಕೌಜಲಗಿ ಹಾಗೂ ‘ಪ್ರಜಾವಾಣಿ’ ಪತ್ರಿಕೆಯ ಪ್ರಸರಣ ವಿಭಾಗದ ಬಸಪ್ಪ ಮಗದುಮ್ ಇದ್ದರು.
ನಗರದ ಪ್ರಮುಖ ಬಡಾವಣೆ, ಸಾರ್ವಜನಿಕ ಸ್ಥಳಗಳಲ್ಲಿಆಟೋ ರಿಕ್ಷಾ ಮೂಲಕ ನ್ಯೂಸ್ ಕ್ವಿಜ್ ಕುರಿತು ಪ್ರಚಾರ ಮಾಡಲಾಯಿತು.