ತಾಳಿಕೋಟೆ: ತಾಲ್ಲೂಕಿನ ಚಬನೂರ ಗ್ರಾಮದ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ ಜೂನ್ 6 ರಂದು ಬಾದ್ಮಿ ಅಮವಾಸ್ಯೆಯಂದು ನಡೆಯಲಿದೆ. ತನ್ನಿಮಿತ್ತವಾಗಿ ಪ್ರವಚನ ಕಾರ್ಯಕ್ರಮವು ಮೇ 26ರಿಂದ ಜೂನ್ 5ರವರೆಗೆ ಪ್ರತಿದಿನ ಸಂಜೆ 6.30 ರಿಂದ 9.30 ರವರೆಗೆ ನಡೆಯಲಿದೆ.
ರಾಯಚೂರು ಜಿಲ್ಲೆ ಸಿಂಧನೂರ ತಾಲ್ಲೂಕಿನ ಗಿಣಿವಾರ ಹಿರೇಮಠದ ಶಿವಾಚಾರ್ಯ ಸ್ವಾಮೀಜಿ ನಡೆಸಿಕೊಡುವರು. ಅವರಿಗೆ ಕೊಡೆಕಲ್ಲದ ಗವಾಯಿ ನಾಗರಾಜ ಹೂಗಾರ ಸಂಗೀತ, ಚೋಕಾವಿಯ ಬಸನಗೌಡ ಬಿರಾದಾರ ತಬಲಾ ಸಾಥ್ ನೀಡುವರು.
ಜೂನ್ 5 ರಂದು ಪ್ರವಚನ ಮಹಾಮಂಗಲದಲ್ಲಿ ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಸಾಧನೆ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.
ಜಾತ್ರಾ ವಿಶೇಷ: ಜೂನ್ 1 ರಂದು ಹೂವಿಗೆ ಹೋಗುವ ಕಾರ್ಯಕ್ರಮ, ಜೂನ್ 4 ರಂದು ದೇವರು ಹಾಸಿಗೆ ಕೂಡುವ ಕಾರ್ಯಕ್ರಮ, ಜೂನ್ 5 ರಂದು ಎತ್ತಿನಗಾಡಿ (ಪುಟ್ಟಗಾಡಿ) ರೇಸ್ ನಡೆಯಲಿದೆ.
ಜೂನ್ 6 ರಂದು ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣೆ ಶಿಬಿರವು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಬ.ಲಿಂಗದಳ್ಳಿ(ಚಬನೂರ) ಹಾಗೂ ಬಿಎಲ್ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ಸೂಪರ್ಸ್ಪೇಶಾಲಿಟಿ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಚಬನೂರ ಗ್ರಾಮದ ಆರೋಗ್ಯ ಇಲಾಖೆ ಹಾಗೂ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದೆ.
ಸಂಜೆ 6ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು ಇದೇ ದಿನ ರಾತ್ರಿ ಡೊಳ್ಳಿನ ಕೈಪಟ್ಟು, ವಾಲಗ, ಕೈಚಕ್ಕಳಿ, ದೇವರ ಹೇಳಿಕೆಯಾಗುವುದು. ಜೂನ್ 8 ರಂದು ದೇವರು ಗವಿಗೆ ಹೋಗುವ ಕಾರ್ಯಕ್ರಮ ನಡೆಯಲಿದೆ ಎಂದು ಜಾತ್ರಾ ಸಮಿತಿಯ ಪ್ರಕಾಶ ಚಬನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ