ಆಲಮೇಲ(ವಿಜಯಪುರ): ತಾಲ್ಲೂಕಿನ ಬಮ್ಮನಹಳ್ಳಿ, ದೇವರನಾವದಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ಚಿರತೆಯು ಆಕಳು ಮೇಲೆ ದಾಳಿ ಮಾಡಿ, ಕೊಂದುಹಾಕಿದೆ.
ಒಂದು ವಾರದಿಂದ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆ ಓಡಾಡುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದರೂ ಯಾರು ಪರಿಗಣನೆ ಮಾಡಿರಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಎರಡು ದಿನಗಳ ಹಿಂದೆ ದೇವರನಾವದಗಿ ಗ್ರಾಮದ ವ್ಯಾಪ್ತಿಯಲ್ಲಿ ಎರಡು ಆಕಳ ಕರುಗಳ ಮೇಲೆ ದಾಳಿ ಮಾಡಿ ಕೊಂದುಹಾಕಿದೆ. ಆದರೆ, ಈ ಬಗ್ಗೆ ಯಾರು ದೂರು ನೀಡದೇ ಇರುವುದರಿಂದ ಮಾಹಿತಿ ಸ್ಪಸ್ಟವಾಗಿರಲಿಲ್ಲ.
ಮಂಗಳವಾರ ರಾತ್ರಿ ಬೂಮ್ಮನಹಳ್ಳಿ ಗ್ರಾಮದ ಪ್ರೇಮನಗೌಡ ಗೋಲ್ಲಾಳಗೌಡ ಬಿರಾದಾರ ಎಂಬುವವರ ಜಮೀನಿನಲ್ಲಿದ್ದ ಆಕಳ ಮೇಲೆ ದಾಳಿ ಮಾಡಿ ಕೊಂದಿರುವ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಚಿರತೆಯೇಈ ದಾಳಿ ಮಾಡಿದೆ ಎಂದು ಖಚಿತಪಡಿಸಿದ್ದಾರೆ.
ಶೀಘ್ರ ಸೆರೆ:
ಚಿರತೆಯನ್ನು ಹಿಡಿಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಈ ಭಾಗದಲ್ಲಿ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳದಲ್ಲೆ ಬೀಡುಬಿಟ್ಟು, ಅದರ ಚಲನವಲನ ಆಧರಿಸಿ ಆದಷ್ಟು ಬೇಗ ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿಹೊತ್ತು ರೈತರು ಜಾಗೃತೆಯಿಂದ ಇರಬೇಕು ಎಂದು ಎಚ್ಚರಿಗೆ ನೀಡಿದ್ದಾರೆ.
ಸಿಂದಗಿ ತಹಶೀಲ್ದಾರ್ ಸಂಜೀವಕುಮಾರ ದಾಸರ, ಕಂದಾಯ ಅಧಿಕಾರಿ ಎ.ಡಿ. ಅತ್ತಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಚಿರತೆ ದಾಳಿ ಮಾಡಿರುವ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆಮಾಜಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿದ್ದರು. ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯುವಂತೆ ಆಗ್ರಹಿಸಿದರು.