ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದೇವ ಭೈರಗೊಂಡ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ: ಅಭಿಮಾನಿಗಳಿಂದ ಸನ್ಮಾನ

Last Updated 3 ಮೇ 2019, 14:35 IST
ಅಕ್ಷರ ಗಾತ್ರ

ಚಡಚಣ (ವಿಜಯಪುರ):ಭೀಮಾ ತೀರದ ರೌಡಿಶೀಟರ್‌ ಧರ್ಮರಾಜ ಚಡಚಣನ ನಕಲಿ ಎನ್‌ಕೌಂಟರ್‌, ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕಾಂಗ್ರೆಸ್ ಮುಖಂಡ ಮಹಾದೇವ ಭೈರಗೊಂಡ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ, ಕೆರೂರಿಗೆ ಬರುತ್ತಿದ್ದಂತೆ ಶುಕ್ರವಾರ ಅಭಿಮಾನಿಗಳು, ಬೆಂಬಲಿಗರು ಸನ್ಮಾನದ ಹೊಳೆಯನ್ನೇ ಹರಿಸಿದರು.

ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಗುರುವಾರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಭೈರಗೊಂಡ, ವಿಜಯಪುರದ ದರ್ಗಾ ಜೈಲಿನಿಂದ ಅಧಿಕೃತ ಆದೇಶ ಪಡೆದು ರಾತ್ರಿ ಕೆರೂರಿಗೆ ಬಂದಿದ್ದರು. ಈ ಸುದ್ದಿ ತಿಳಿದ ಅಸಂಖ್ಯಾತ ಬೆಂಬಲಿಗರು ನೂರಾರು ವಾಹನಗಳಲ್ಲಿ ಜಮಾಯಿಸಿ, ಸ್ವಾಗತ ಕೋರಿದರು.

ಶುಕ್ರವಾರ ನಸುಕಿನಿಂದಲೇ ಅಪಾರ ಜನರು ಮಹಾದೇವ ಭೇಟಿಗಾಗಿ ಕೆರೂರ ಗ್ರಾಮಕ್ಕೆ ಧಾವಿಸಿದ್ದರು. ಚಡಚಣ ಸೇರಿದಂತೆ ನೆರೆಯ ಮಹಾರಾಷ್ಟ್ರದ ಅಪಾರ ಬೆಂಬಲಿಗರು ಭೈರಗೊಂಡ ಭೇಟಿಯಾಗಿ ಕುಶಲೋಪರಿ ನಡೆಸಿದರು. ಪರಸ್ಪರ ಚರ್ಚಿಸಿದ ದೃಶ್ಯ ಭೈರಗೊಂಡ ಖಡಿ ಮಷಿನ್ ಬಳಿ ಗೋಚರಿಸಿತು. ಜೈಕಾರಗಳು ಮೊಳಗಿದವು.

ಮರಳು ದಂಧೆ ಪ್ರಕರಣದಲ್ಲಿ ಈ ಹಿಂದೆ ಮಹಾದೇವ ಭೈರಗೊಂಡ ಜೈಲು ಪಾಲಾಗಿದ್ದ. ಆಗಲೂ ಜಾಮೀನಿನ ಮೇಲೆ ಬಿಡುಗಡೆಗೊಂಡ ಸಂದರ್ಭ, ಅಭಿಮಾನಿಗಳು, ಬೆಂಬಲಿಗರು ಭೈರಗೊಂಡನಿಗೆ ಕ್ಷೀರಾಭಿಷೇಕ ನಡೆಸಿದ್ದರು.

‘ಭೈರಗೊಂಡ–ಚಡಚಣ ಮನೆತನಗಳ ಹಿರಿಯರ ನಡುವೆ ಹಿಂದೆ ದ್ವೇಷವಿತ್ತು. ಇದನ್ನು ನಾನು ಬೆಳೆಸಿದವನಲ್ಲ. ವಿನಾಃ ಕಾರಣ ಸಹೋದರರ ಹತ್ಯೆ ಪ್ರಕರಣದಲ್ಲಿ ನನ್ನನ್ನು ಆರೋಪಿಯನ್ನಾಗಿಸಲಾಗಿದೆ. ಮುಂದೆಯೂ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ನಾನು ಭಾಗಿಯಾಗಲ್ಲ. ಜೀವಕ್ಕಿಂತ ಹೆಚ್ಚಾಗಿ ಬೆಳೆಸಿರುವ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸುವೆ’ ಎಂದು ಮಹಾದೇವ ಭೈರಗೊಂಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT