ತಿಕೋಟಾ: ಗುಣಮಟ್ಟದ ದ್ರಾಕ್ಷಿ ಬೆಳೆಗೆ ಹೆಸರುವಾಸಿಯಾದ ಈ ಭಾಗದಲ್ಲಿ ಹೊಸದಾದ ಜೆರೇನಿಯಂ ಕೃಷಿ ಮಾಡುವ ಕನಸು ಹೊತ್ತು ನೌಕರಿ ತೊರೆದ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಡಿಪ್ಲೊಮಾ ಪದವೀಧರ ಬಸವರಾಜ ಹಣಮಂತ ಬರಗಾಲ ಇದೀಗ ಲಕ್ಷಾಂತರ ರೂಪಾಯಿ ಆದಾಯ ಪಡೆದು ಮಾದರಿ ಎನಿಸಿದ್ದಾರೆ.
ತಮ್ಮ ಏಳು ಎಕರೆ ಜಮೀನಿನಲ್ಲಿ ಎರಡು ಎಕರೆ ದ್ರಾಕ್ಷಿ, ಒಂದು ಎಕರೆ ಜೆರೇನಿಯಂ ಕೃಷಿ ಮಾಡಿದ್ದಾರೆ. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಲ್ವನದಿಂದ ₹ 5ಕ್ಕೆ ಒಂದರಂತೆ ಒಟ್ಟು ಹನ್ನೆರಡು ಸಾವಿರ ಜೆರೇನಿಯಂ ಖರೀದಿಸಿ ತಂದಿದ್ದಾರೆ. ಡ್ರಿಪ್ ಮತ್ತಿತರ ಖರ್ಚು ಸೇರಿ ಒಟ್ಟು ₹ 75 ಸಾವಿರ ಖರ್ಚು ಮಾಡಿದ್ದಾರೆ. ಸಾಲಿನಿಂದ ಸಾಲಿಗೆ ನಾಲ್ಕು ಅಡಿ, ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಅಂತರದಲ್ಲಿ ಜೆರೇನಿಯಂ ನಾಟಿ ಮಾಡಿದ್ದಾರೆ.
ವರ್ಷದಲ್ಲಿ ನಾಲ್ಕು ಫಸಲು ತೆಗೆಯುತ್ತಿರುವ ಅವರು, ಮೊದಲ ಫಸಲಿಗೆ ₹ 75 ಸಾವಿರ, ಎರಡನೇ ಬೆಳೆ ₹ 70 ಸಾವಿರ, ಮೂರನೇ ಬೆಳೆ ₹ 70 ಸಾವಿರ, ನಾಲ್ಕನೇ ಬೆಳೆ ₹ 70 ಸಾವಿರ ಆದಾಯ ಪಡೆದಿದ್ದಾರೆ. ಇದರಿಂದಾಗಿ ಒಂದು ಎಕರೆಗೆ ₹ 2 ಲಕ್ಷ ವಾರ್ಷಿಕ ಲಾಭ ಪಡೆದಿದ್ದಾರೆ.
ಸುಗಂಧ ದ್ರವ್ಯಕ್ಕೆ ಬಳಕೆ: ಒಂದು ಟನ್ ತಪ್ಪಲು ಕಟಾವು ಮಾಡಿ ಯಂತ್ರಕ್ಕೆ ಹಾಕಿದಾಗ ಒಂದು ಕೆ.ಜಿ ಸುಗಂಧ ದ್ರವ್ಯ ಬರುತ್ತದೆ. ಒಂದು ಕೆ.ಜಿ ಸುಗಂಧ ದ್ರವ್ಯದ ಬೆಲೆ ₹ 11 ಸಾವಿರದಿಂದ ₹ 15 ಸಾವಿರ ಇದೆ. ಒಂದು ಬೆಳೆಗೆ, ಅಂದರೆ ಪ್ರತಿ ಮೂರು ತಿಂಗಳಿಗೆ 10–15 ಕೆ.ಜಿ ದ್ರವ್ಯ ಉತ್ಪಾದನೆ ಆಗುತ್ತದೆ. ಅದನ್ನು ಪ್ರತಿಷ್ಠಿತ ಸಾಬೂನು, ಸೆಂಟ್, ಔಷಧ, ಪರ್ಫ್ಯೂಮ್, ಅಗರಬತ್ತಿಗಳಲ್ಲಿ ಬಳಕೆ ಮಾಡುತ್ತಾರೆ.
ಸದ್ಯ ತಪ್ಪಲನ್ನು ಮಹಾರಾಷ್ಟ್ರಕ್ಕೆ ಕೊಂಡೊಯ್ದು ಅಲ್ಲಿ ದ್ರವ್ಯ ತೆಗೆಸುತ್ತಾರೆ. ಮುಂದಿನ ದಿನದಲ್ಲಿ ₹15 ಲಕ್ಷ ವೆಚ್ಚದ ಯಂತ್ರವನ್ನು ಖರೀದಿಸುವ ಯೋಜನೆಯನ್ನೂ ಅವರು ಹೊಂದಿದ್ದಾರೆ.
ದರ ಇಲ್ಲದ ಕಾರಣ ಏಳೆಂಟು ಟನ್ ಒಣದ್ರಾಕ್ಷಿ ಶೀತಲ ಘಟಕದಲ್ಲೇ ಹಾಗೇ ಇದೆ. ದ್ರಾಕ್ಷಿ ಬೆಳೆಗೆ ಖರ್ಚು ಹೆಚ್ಚು ಆದಾಯ ಕಡಿಮೆಯಾಗುತ್ತಿದೆ ಬ– ಸವರಾಜ ಹಣಮಂತ ಬರಗಾಲ, ಜೆರೇನಿಯಂ ಕೃಷಿಕ ಬಿಜ್ಜರಗಿ
ದ್ರಾಕ್ಷಿ ಜೊತೆ ರೈತರು ಪರ್ಯಾಯವಾಗಿ ಬೆರೇನಿಯಂ ಬೆಳೆದರೆ ಕಡಿಮೆ ಖರ್ಚಿನಿಂದ ಹೆಚ್ಚಿನ ಆದಾಯ ಪಡೆಯಬಹುದು. ನೀರು ಔಷಧ ಖರ್ಚು ಕಡಿಮೆ– ರಾಹುಲಕುಮಾರ ಬಾವಿಕಟ್ಟಿ , ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.