ವಿಜಯಪುರ: ಎನ್.ಶಂಕ್ರಪ್ಪ ಆಯೋಗದ ಶಿಫಾರಸ್ಸಿನಂತೆ ಮರಾಠ ಸಮಾಜವನ್ನು ಪ್ರವರ್ಗ 3 ‘ಬಿ’ ಯಿಂದ 2‘ಎ’ ಗೆ ಸೇರ್ಪಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ ಜಿಲ್ಲಾ ಸಕಲ ಮರಾಠಾ ಸಮಾಜದಿಂದ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರಕ್ಕೆ ಬುಧವಾರ ಭೇಟಿ ನೀಡಿದ ಸಚಿವರಿಗೆ ಸಮಾಜದಿಂದ ಸನ್ಮಾನಿಸಿ ಮನವಿ ಸಲ್ಲಿಸಿಸಲಾಯಿತು.
ಶಾಹು ಮಹಾರಾಜರ ಹೆಸರಿನಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸಮಾಜದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಸ್ಥಾಪಿಸಬೇಕು. ಸ್ಥಳೀಯ ಮರಾಠ ಸಮುದಾಯಕ್ಕಾಗಿಸಂಸ್ಕೃತಿಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ವಿಜಯಪುರದಲ್ಲಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯದ ದಿನಗಳನ್ನು ಕಳೆದಿರುವುದರಿಂದ ನೆನಪಿಗಾಗಿ ಭವ್ಯ ಸ್ಮಾರಕ ನಿರ್ಮಾಣ ಮಾಡಬೇಕು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಜೀಜಾಮಾತಾ ಅಧ್ಯಯನ ಪೀಠ ಸ್ಥಾಪಿಸಬೇಕು ಹಾಗೂ ಶಿಲ್ಪ ಉದ್ಯಾನದಲ್ಲಿ ಜೀಜಾಮಾತಾ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿದರು.
ಸಮಾಜದ ಅಧ್ಯಕ್ಷ ವಿನಯ್ ಚವ್ಹಾಣ, ಮುಖಂಡರಾದ ರಾಹುಲ್ ಜಾಧವ್, ಪ್ರಭಾಕರ್ ಬೋಸ್ಲೆ, ವಿಠಲ್ ಚವ್ಹಾಣ, ಶಂಕರ ಕನ್ಸೆ, ರಾಜು ಮೋರೆ, ಸದಾಶಿವ ಪವಾರ್, ಶಿವಾಜಿ ಜಾಧವ್, ವಿಜಯ ಘೋಟ್ಕೆ, ಲಕ್ಷ್ಮಣ ಜಾಧವ್, ನರಸಿಂಗ್ ಮಸ್ಕಿ, ಸಂಜಯ್ ಜಾಧವ್, ಪ್ರವೀಣ್ ಬೋಡ್ಕೆ, ಭೀಮಾಶಂಕರ್ ಶಿವಲ್ಕರ್ ಇದ್ದರು.